ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಜುಲೈ 21-22ರ ಅಧಿವೇಶನದ ಬಳಿಕ ತನ್ನ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿಯನ್ನು ನಿರಾಕರಿಸಿದ್ದಾರೆ. ಈ ಹಿಂದೆ ಸ್ಪೀಕರ್ ಸೋಮನಾಥ್ ಚಟರ್ಜಿಯವರು ಅಧಿವೇಶನದ ಬಳಿಕ ತನ್ನ ಸ್ಪೀಕರ್ ಸ್ಥಾನ, ಸಂಸತ್ ಸದಸ್ಯತ್ವ ಹಾಗೂ ಪಕ್ಷದ ಸದಸ್ಯತ್ವವನ್ನು ತೊರೆಯಲಿದ್ದಾರೆ ಎಂಬುದಾಗಿ ಕೆಲವು ಮೂಲಗಳು ಸುದ್ದಿ ಮಾಡಿದ್ದವು.
ಆದಾಗ್ಯೂ, ಬುಧವಾರ ಹೈದರಾಬಾದ್ಗೆ ನೇತ್ರ ಪರಿಶೋಧನೆಗಾಗಿ ಆಗಮಿಸಿದ್ದ ಚಟರ್ಜಿಯವರು ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದು ಮೌನ ವಹಿಸಿದ್ದರು ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಕಾಂಗ್ರೆಸ್ ಪಕ್ಷವು ಸ್ಪೀಕರ್ ಅವರಿಗೆ ಭಾರೀ ರಕ್ಷಣೆಯನ್ನೊದಗಿಸುತ್ತಿದ್ದು, ಅದೇ ವೇಳೆ ತಾನು ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿ ಜೊತೆ ಸರಕಾರ ವಿರುದ್ಧ ಮತ ಚಲಾಯಿಸುವುದಿಲ್ಲ ಎಂದು ಹೇಳಿದ ಚಟರ್ಜಿಯವರ ನಿಷ್ಪಕ್ಷಪಾತವನ್ನು ಭಾರತೀಯ ಜನತಾ ಪಕ್ಷವು ಪ್ರಶ್ನಿಸಿದೆ.
ಚಟರ್ಜಿಯವರ ನಿಷ್ಪಕ್ಷಪಾತದ ನಿಲುವಿನಲ್ಲಿಯೂ ಯುಪಿಎ ಸರಕಾರವನ್ನು ಬೆಂಬಲಿಸದೇ ಇರುವ ಸಂಸದರ ಪಟ್ಟಿಯಲ್ಲಿ ಚಟರ್ಜಿಯವರನ್ನು ಸೇರಿಸುವುದರಲ್ಲಿ ತಪ್ಪೇನಿಲ್ಲ ಎಂಬುದಾಗಿ ಸಿಪಿಐ(ಎಂ) ಹೇಳಿಕೆ ನೀಡಿದೆ. ಈ ಬಗ್ಗೆ ಮಾತನಾಡಿದ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಸೀತಾರಾಂ ಯೆಚೂರಿಯವರು, ಸ್ಪೀಕರ್ ಸೋಮನಾಥ ಚಟರ್ಜಿ ಸಿಪಿಎಂ ಪಕ್ಷದಿಂದ ಆಯ್ಕೆಯಾದ ಕಾರಣ ಅವರನ್ನು ಸರಕಾರಕ್ಕೆ ಬೆಂಬಲ ನೀಡದ ಸಂಸತರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ.
ಏತನ್ಮಧ್ಯೆ, ಚಟರ್ಜಿಯವರ ನಿಲುವು ಸಿಪಿಎಂ ಪಕ್ಷದ ಮಧ್ಯೆ ಅಸಮಾಧಾನವನ್ನುಂಟು ಮಾಡಿದ್ದು. ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಹಾಗೂ ಸಿಪಿಐ(ಎಂ) ನಾಯಕ ಸುಭಾಸ್ ಚಕ್ರವರ್ತಿ ಅವರು ಚಟರ್ಜಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅದೇ ವೇಳೆ ಬಿಜೆಪಿ ಜೊತೆ ಸೇರಿ ಯುಪಿಎ ಸರಕಾರ ವಿರುದ್ಧ ಮತ ಚಲಾಯಿಸುವುದಿಲ್ಲ ಎಂಬ ಸ್ಪೀಕರ್ ಹೇಳಿಕೆಯನ್ನು ಕೇರಳದ ಮಾಜಿ ಸ್ಪೀಕರ್ ಹಾಗೂ ಪಕ್ಷದ ಹಿರಿಯ ಸಂಸದ ವರ್ಕಲ ರಾಧಾಕೃಷ್ಣನ್ ಅವರು ಖಂಡಿಸಿದ್ದಾರೆ.
|