ಮಹಾನ್ ಮಂಗಳವಾರದ ಮಹತ್ವದ 'ವಿಶ್ವಾಸಮತ' ಅಧಿವೇಶನಕ್ಕೆ ಮುನ್ನ ಶುಕ್ರವಾರ ಕರೆಯಲಾಗಿದ್ದ ಸಮಾಜವಾದಿ ಪಕ್ಷದ ಸಂಸದೀಯ ಮಂಡಳಿ ಸಭೆಗೆ 39ರಲ್ಲಿ ಕೇವಲ 16 ಸಂಸದರು ಮಾತ್ರವೇ ಭಾಗವಹಿಸುವ ಮೂಲಕ ಕುತೂಹಲಕ್ಕೆ ಕಾರಣವಾಗಿದೆ.
ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಪಾಲ್ಗೊಂಡಿದ್ದ ಈ ಸಭೆಯಲ್ಲಿ ಜು.22ರಂದು ಯುಪಿಎ ಸರಕಾರದ ವಿಶ್ವಾಸಮತ ಯಾಚನೆ ಸಂದರ್ಭ ಅದರ ಪರವಾಗಿ ಮತ ಚಲಾಯಿಸುವಂತಾಗಲು, ಜು.21 ಹಾಗೂ 22ರಂದು ಲೋಕಸಭೆಯಲ್ಲಿ ಹಾಜರಿರುವಂತೆ ಸದಸ್ಯರಿಗೆ ಸಚೇತಕಾಜ್ಞೆ ನೀಡಲಾಯಿತು.
ಆದರೆ ಭಾಗವಹಿಸಿದವರು ಕೇವಲ 16 ಮಂದಿ ಮಾತ್ರ. ಅತೀಕ್ ಅಹ್ಮದ್ ಮತ್ತು ಅಫ್ಜಲ್ ಅನ್ಸಾರಿ ಅವರಿಬ್ಬರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೆ, ಉಳಿದ ಇಬ್ಬರಾದ ರಾಜ್ ಬಬ್ಬರ್ ಮತ್ತು ಬೇನಿ ಪ್ರಸಾದ್ ವರ್ಮಾ ಅವರನ್ನು ಪಕ್ಷವು ಇತ್ತೀಚೆಗೆ ಅಮಾನತುಗೊಳಿಸಿತ್ತು. ಮುನವ್ವರ್ ಹುಸೇನ್ ಅವರಂತೂ ತಾನು ನಿರ್ಣಯದ ವಿರುದ್ಧ ಮತ ಚಲಾಯಿಸುವುದಾಗಿ ಬಹಿರಂಗವಾಗಿಯೇ ಘೋಷಿಸಿದ್ದರು. ಮತ್ತಿಬ್ಬರಾದ ರಾಜನಾರಾಯಣ್ ಬುಧೋರಲಿಯಾ ಹಾಗೂ ಜೈಪ್ರಕಾಶ್ ಅವರು ಕೂಡ ಇದೇ ರೀತಿಯ ತಮ್ಮ ನಿಲುವು ಪ್ರಕಟಿಸಿದ್ದರು.
ಒಟ್ಟು 23 ಸಂಸದರ ಅನುಪಸ್ಥಿತಿಯು ಕಾಂಗ್ರೆಸ್ ಪಾಳಯದಲ್ಲಿ ಮತ್ತಷ್ಟು ನಡುಕ ಹುಟ್ಟಿಸಿದೆ.
|