ಅಮರನಾಥ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಮುಷ್ಕರ ಹಿಂಸಾಚಾರಕ್ಕೆ ತಿರುಗಿದ್ದು, ಒಟ್ಟು ಮೂರು ಮಂದಿಸಾವನ್ನಪ್ಪಿದ್ದು, ಇತರ 60 ಮದಿ ಗಾಯಗೊಂಡಿದ್ದಾರೆ.
ಹೊಸ ಹಿಂಸಾಚಾರವನ್ನು ತಡೆಯಲು ಪೊಲೀಸರು ನಡೆಸಿರುವ ಗೋಲಿಬಾರ್ ವೇಳೆಗೆ ಓರ್ವ ವ್ಯಕ್ತಿ ಮೃತನಾಗಿದ್ದಾನೆ.
ಸಾಂಬಾ ಪಟ್ಟಣದಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಬೀದಿಗಿಳಿದಾಗ ಉಂಟಾಗಿರುವ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇತರ 29 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 20 ಮಂದಿ ಭದ್ರತಾ ಪಡೆಯ ಸಿಬ್ಬಂದಿಯಾಗಿದ್ದಾರೆ.
ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದ್ದರೂ ಪ್ರಯೋಜನವಾಗದಿದ್ದಾಗ, ಗುಂಪು ಚದುರಿಸಲು ಗುಂಡು ಹಾರಿಸಿದ್ದು, ಈ ವೇಳೆ ಸಂಜೀವ್ ಕುಮಾರ್(24) ಮತ್ತು ಸುನ್ನಿ ಪಧಾ(30) ಎಂಬವರು ಗುಂಡೇಟು ತಗುಲಿ ಮೃತರಾಗಿದ್ದಾರೆ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಗಲಭೆಯ ವೇಳೆ 20 ಭದ್ರತಾ ಸಿಬ್ಬಂದಿಗಳು ಮತ್ತು ಎಂಟು ನಾಗರಿಕರು ಗಾಯಗೊಂಡಿದ್ದಾರೆ.
ಶ್ರೀನಗರದಲ್ಲಿ ಅಸಿಫ್ ಮೆಹ್ರಾಜ್ ಎಂಬಾತನ ಎದೆಗೆ ಅಶ್ರುವಾಯು ಸೆಲ್ ಬಡಿದು ಸಾವನ್ನಪ್ಪಿದ್ದಾನೆ. ಆಸಿಫ್ನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಅಲ್ಲಿಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದ.
ಏತನ್ಮಧ್ಯೆ, 35 ರಾಜಕೀಯ ಪಕ್ಷಗಳು, ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳನ್ನೊಳಗೊಂಡ ಅಮರ್ನಾಥ ಸಂಘರ್ಷ ಸಮಿತಿಯು ನೀಡಿರುವ ಬಂದ್ ಕರೆಯನ್ನು ಐದು ದಿನಗಳಿಗೆ ವಿಸ್ತರಿಸಿದೆ.
|