ಒರಿಸ್ಸಾ ಗಲಭೆ ಕುರಿತಂತೆ ತನ್ನ ಮೌನ ಮುರಿದಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಹಿಂಸಾಚಾರವನ್ನು ರಾಷ್ಟ್ರೀಯ ಅವಮಾನ ಎಂದು ಜರೆದಿದ್ದಾರೆ.
ರಾಜ್ಯದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಪ್ರಧಾನಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಕ್ರಿಶ್ಚಿಯನ್ ಸಮುದಾಯದ ಪ್ರತಿನಿಧಿಗಳು ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ ಎಂದು ಕ್ಯಾಥೋಲಿಕ್ ಬಿಶಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ವಕ್ತಾರ ಬಾಬು ಜೋಸೆಫ್ ಹೇಳಿದ್ದಾರೆ.
ಗಲಭೆಯಿಂದ ಹಾನಿಗೀಡಾಗಿರುವ ಕುಟುಂಬಗಳಿಗೆ ಪ್ರಧಾನ ಮಂತ್ರಿಯವರ ಪರಿಹಾರ ನಿಧಿಯಿಂದ ಮೂರು ಲಕ್ಷ ರೂಪಾಯಿ ನೀಡುವುದಾಗಿ ಅವರು ಭರವಸೆ ನೀಡಿರುವುದಾಗಿಯೂ ಜೋಸೆಫ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರನ್ನು ಸಂಪರ್ಕಿಸಿರುವ ಪ್ರಧಾನಿಯವರು ಗಲಭೆ ನಿಯಂತ್ರಣಕ್ಕೆ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಒರಿಸ್ಸಾದ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಿಗೆ ಸೂಕ್ತ ರಕ್ಷಣೆ ನೀಡುವಂತೆಯೂ ಪ್ರಧಾನಿಯವರು ನವೀನ್ ಪಟ್ನಾಯಕ್ ಅವರಿಗೆ ಹೇಳಿರುವುದಾಗಿ ಪ್ರಧಾನಮಂತ್ರಿ ಕಚೇರಿ ಹೇಳಿಕೆ ತಿಳಿಸಿದೆ.
|