ರಾಜ್ಯದ ಕಂಧಮಾಲ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಕೋಮಗಲಭೆ ಹಿಂಸಾಚಾರ ಮುಂದುವರಿದಿದೆ. ಇಂದು 24 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಎರಡು ಮೃತದೇಹಗಳು ದೊರೆತಿರುವ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ 14ಕ್ಕೇ ಏರಿದಂತಾಗಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದು ,ಆಗಸ್ಟ್ 23 ರಂದು ಜಲೆಸ್ಪೇಟಾದಲ್ಲಿರುವ ವಿಶ್ವಹಿಂದು ಪರಿಷತ್ ನಾಯಕ ಲಕ್ಷ್ಮಣಾನಂದ್ ಸರಸ್ವತಿ ಹಾಗೂ ಅವರ ಮೂವರು ಶಿಷ್ಯರನ್ನು ಹತ್ಯೆ ಮಾಡಿದ ಸ್ಥಳಕ್ಕೆ ಭೇಟಿ ನೀಡಿದರು.
ಕೆಟ್ಟ ಹವಾಮಾನದ ಕಾರಣ ಹೆಲಿಕಾಪ್ಟರ್ ಪ್ರಯಾಣವನ್ನು ರದ್ದುಗೊಳಿಸಿ ರಸ್ತೆ ಮುಖಾಂತರ ತೆರಳಲು ಮುಖ್ಯಮಂತ್ರಿ ನಿರ್ಧರಿಸಿದರು ಎಂದು ಅಧಿಕಾರಿ ಮೂಲಗಳು ತಿಳಿಸಿವೆ
ರೈಕಿಯಾ ಬಳಿಯಿರುವ ಪೆಟಾಪಂಗಾ ಗ್ರಾಮದ ಬಳಿ ಎರಡು ಶವಗಳು ದೊರೆತಿದ್ದು, ಇದರಿಂದಾಗಿ ಮೃತರಾದವರ ಸಂಖ್ಯೆ 14ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುರೇಶ್ ಮೊಹಾ ಪಾತ್ರಾ ತಿಳಿಸಿದ್ದಾರೆ.
ಕತ್ರಿಂಗಿಯಾ,ಕಾನಿಬಲಿ, ಭಘದುಂಗ್ರಿ ಮತ್ತು ಗೋಚಾಪಾಡಾ ಪಂಚಾಯತ್ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಾವು ನೋವುಗಳ ವರದಿಯಾಗಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
|