ಕೋಸಿ ನದಿಯ ಪ್ರವಾಹ ಹೆಚ್ಚಳದಿಂದಾಗಿ ಬಿಹಾರ ಪೂರ್ನಿಯಾ ಜಿಲ್ಲೆಯ ಜಾನಕೀನಗರ ಬ್ರಾಂಚ್ ಕಾಲುವೆ(ಜೆಬಿಸಿ) ಅಣೆಕಟ್ಟು ಶನಿವಾರ ರಾತ್ರಿ ಒಡೆದಿದ್ದು, ಈಗಾಗಲೇ ಪ್ರವಾಹದಿಂದ ಕಂಗೆಟ್ಟಿರುವ ಲಕ್ಷಾಂತರ ಮಂದಿಯಲ್ಲಿ ಪ್ರವಾಹ ಹೆಚ್ಚಳದ ಭೀತಿಯನ್ನು ಇದು ಮತ್ತಷ್ಟು ಹೆಚ್ಚಿಸಿದೆ.
ನೇಪಾಳವು 2.5 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟ ಪರಿಣಾಮವಾಗಿ, ಜಾನಕೀನಗರದ ಅಣೆಕಟ್ಟಿನ ಪೂರ್ವ ಭಾಗವು ಒಡೆದಿದ್ದು, ದರ್ಹರಾ ಕೋತಿ, ದಂದಾಹ, ಪೂರ್ನಿಯಾದ ಭವಾನಿಪುರ ಬ್ಲಾಕ್ ಮುಂತಾದ ಕಡೆಗಳಲ್ಲಿ ಪ್ರವಾಹ ಪ್ರಮಾಣವು ಮೇಲೇರುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಭೂಪೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬನ್ಮಾಂಕಿ-ಬಿಹಾರಿಗಂಜ್ ರೈಲ್ವೇ ಮಾರ್ಗದ ಮೇಲೆ ನೀರು ಹರಿಯುತ್ತಿದ್ದು, ಈ ಪ್ರದೇಶವು ಈವರೆಗೆ, ಬಿಹಾರಿಗಂಗ್ ಬ್ಲಾಕ್ನ ನೆರೆ ಬಲಿಪಶುಗಳ ಸುರಕ್ಷಿತ ಕೇಂದ್ರವಾಗಿತ್ತು. ಈ ಪ್ರದೇಶದ ರೈಲ್ವೇ ಸಂಚಾರವು ಸ್ಥಗಿತಗೊಂಡಿದೆ.
ಬಿರ್ಪುರ್ ಮತ್ತು ರೂಪೈಲಿ ಪ್ರದೇಶದ ನೀರನ್ನು ಈ ಕಾಲುವೆಯು ಒಳಗೊಂಡಿದ್ದು, ಕಾಲುವೆ ಒಡೆದ ಪರಿಣಾಮವಾಗಿ ಈ ನೀರು ಮತ್ತೆ ಕೋಸಿ ನದಿನೀರಿನೊಂದಿಗೆ ಸೇರಿಕೊಂಡು ಪ್ರವಾಹದ ಪ್ರಮಾಣವನ್ನು ಹೆಚ್ಚಿಸಿದೆ.
|