ಮುಂಬಯಿ: ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಂಧಕ್ಕೀಡಾಗಿರುವ ಸೇವಾನಿರತ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಮಾಲೆಗಾಂವ್ ಸ್ಪೋಟದ ಹಿಂದಿನ ಮಾಸ್ಟರ್ ಮೈಂಡ್ ತಾನೆಂದು ಒಪ್ಪಿಕೊಂಡಿದ್ದಾರೆ. ಆರು ಮಂದಿಯನ್ನು ಬಲಿತೆಗೆದುಕೊಂಡ ಸೆಪ್ಟಂಬರ್ ಆರರ ಬಾಂಬ್ ದಾಳಿಗೆ ಪಿತೂರಿ ನಡೆಸಿ ಸ್ಫೋಟಕಗಳನ್ನು ಒದಗಿಸಿದ್ದಾಗಿ 37ರ ಹರೆಯದ ಮಿಲಿಟರಿ ಆಧಿಕಾರಿ ಪೊಲೀಸರಲ್ಲಿ ಹೇಳಿದ್ದಾಗಿ ವರದಿಯಾಗಿದೆ.
ನವೆಂಬರ್ 5ರಂದು ಬಂಧಿಸಲ್ಪಟ್ಟಿದ್ದ ಪುರೋಹಿತ್, ತೀವ್ರಗಾಮಿ ಹಿಂದೂ ಸಂಘಟನೆಯಾದ ಅಭಿನವ್ ಭಾರತ್ನ ಸದಸ್ಯರಿಗೆ ಮಾರಕ ಆರ್ಡಿಎಕ್ಸ್ ಮತ್ತು ಇತರ ಆಯುಧಗಳನ್ನು ಒದಗಿಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಪುರೋಹಿತ್ರನ್ನು ತನಿಖೆಗೊಳಪಡಿಸಿದ ಸಂದರ್ಭ ಸಿಕ್ಕ ಮಾಹಿತಿಯಂತೆ ಇನ್ನೊಬ್ಬ ಸೇವೆಯಲ್ಲಿರುವ ಮಿಲಿಟರಿ ಆಧಿಕಾರಿಯನ್ನು ಮುಂಬಯಿಯ ಭಯೋತ್ಪಾದನಾ ನಿಗ್ರಹ ದಳದ ಆಧಿಕಾರಿಗಳು ಪ್ರಶ್ನಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನೋರ್ವ ಆಪಾದಿತ ನಿವೃತ್ತ ಮೇಜರ್ ರಮೇಶ್ ಉಪಾದ್ಯಾಯ ಅವರೊಂದಿಗೆ ಪುರೋಹಿತ್ ಸಂಪರ್ಕ ಹೊಂದಿರುವ ಮಾಹಿತಿ ಪುರೋಹಿತ್ರ ದೂರವಾಣಿ ದಾಖಲೆಯಿಂದ ತಿಳಿದು ಬಂದಿದೆ. "ಸ್ಪೋಟದ ಹಿಂದಿನ ಸಂಚು ನಡೆಸಿದವನು ನಾನು. ಆರ್ಡಿಎಕ್ಸ್ ಮತ್ತು ಇತರ ಮಾರಕಾಯುಧಗಳನ್ನು ನಾನು ಪೂರೈಸಿದೆ ಆದರೆ ಇದು ಅಭಿನವ್ ಭಾರತ್ ಸದಸ್ಯರ ಕೈಗೆ ಹೇಗೆ ಸೇರಿತು ಎಂಬುದು ನನಗೆ ತಿಳಿಯುತ್ತಿಲ್ಲ" ಎಂದು ಪುರೋಹಿತ್ ಪೋಲಿಸರಲ್ಲಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ. ಅಭಿನವ್ ಭಾರತ್ ಹಿಂದೂ ತೀವ್ರವಾದಿ ಸಂಘಟನೆಯಾಗಿದ್ದು ಇದು ಇಸ್ಲಾಂ ಸಂಘಟನೆಗಳು ನಡೆಸಿದ ಉಗ್ರವಾದಿ ದಾಳಿಗಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಬಯಸಿತ್ತು. ಅಭಿನವ್ ಭಾರತ್ನ ಸದಸ್ಯರು ಇತರ ಹಿಂದೂ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿದ್ದರು.
ಈ ತಪ್ಪೊಪ್ಪಿಗೆ ವರದಿಗಳ ಬಗ್ಗೆ ಉಗ್ರ ನಿಗ್ರಹ ದಳದ(ಎಟಿಎಸ್) ಯಾವುದೇ ಆಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಎಟಿಸ್ನ ವಕ್ತಾರ ದಿನೇಶ್ ಅಗರ್ವಾಲ್ "ಇದು ಸರಿಯಲ್ಲ" ಎಂದಷ್ಟೆ ಹೇಳಿದ್ದಾರೆ. |