ನೆರೆಮನೆಯಾತನ ಗರ್ಭಧಾರಿ ಹಸುವೊಂದನ್ನು ಇರಿದು ಕೊಂದ ವ್ಯಕ್ತಿಗೆ ದೆಹಲಿ ನ್ಯಾಯಾಲಯವೊಂದು ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ದಕ್ಷಿಣ ದೆಹಲಿಯ ಸಂಗಮ್ ವಿಹಾರದಲ್ಲಿ ನಸೀಮ್ ಖಾನ್(25) ಎಂಬಾತ ಬೇಕರಿಯೊಂದನ್ನು ನಡೆಸುತ್ತಿದ್ದ. ಆತನ ಅಂಗಡಿಯಿಂದ ಕೆಲವು ವಸ್ತುಗಳನ್ನು ಈ ಹಸು ತಿಂದು ಹಾಕಿದ್ದನ್ನು ಕಂಡು ಸಿಟ್ಟಿಗೆದ್ದ ನಸೀಮ್ ಮೂರು ಬಾರಿ ಚೂರಿಯಿಂದ ಇರಿದಿದ್ದು, ಹಸು ಸ್ಥಳದಲ್ಲೇ ಕುಸಿದು ಸತ್ತಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ 429ರ ಸೆಕ್ಷನ್ ಪ್ರಕಾರ ಆರೋಪಿ ಖಾನ್ ತಪ್ಪಿತಸ್ಥನೆಂದು ತೀರ್ಮಾನಿಸಿದೆ.
ಹಸುವಿನ ಕಳೇಬರದ ಮೇಲಿದ್ದ ಗಾಯಗಳನ್ನು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರು ದೃಢೀಕರಿಸಿದ್ದಾರೆ.
ತನಗೆ ವಯಸ್ಸಾದ ಹೆತ್ತವರು ಹಾಗೂ ಪುಟ್ಟ ಮಗು ಇರುವ ಕಾರಣ ಶಿಕ್ಷೆಯಲ್ಲಿ ಉದಾರತೆ ತೋರಬೇಕು ಎಂಬ ಖಾನ್ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ. ಅಲ್ಲದೆ, ತನ್ನದು ಅಪರಾಧದ ಹಿನ್ನೆಲೆಯಲ್ಲ ಮತ್ತು ದೂರು ನೀಡಿರುವ ನೆರೆಮನೆಯಾತನೊಂದಿಗೆ ಯಾವುದೇ ವೈರತ್ವ ಇರಲಿಲ್ಲ ಎಂಬ ಖಾನ್ ವಾದವನ್ನೂ ನ್ಯಾಯಾಲಯ ತಳ್ಳಿಹಾಕಿದೆ.
ಹಸುವಿನ ಮಾಲಕ ವೀರ್ ಸಿಂಗ್ ಅವರು, 2001ರ ಮೇ 20ರಂದು ತನ್ನ ಹಸುವನ್ನು ಖಾನ್ ಇರಿದಿರುವುದಾಗಿ ದೂರು ನೀಡಿದ್ದರು. |