ಮುಂಬಯಿ ಉಗ್ರಗಾಮಿ ದಾಳಿಯಲ್ಲಿ ಭಾಗವಹಿಸಿದ್ದ ಐವರು ಭಯೋತ್ಪಾದಕರು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ಕರಾಚಿಯಿಂದ ಭಾರತಕ್ಕೆ ಉಗ್ರರು ಆಗಮಿಸಿದ ಮೀನುಗಾರಿಕಾ ಬೋಟ್ನಲ್ಲಿ ದೊರೆತ ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಶನಿವಾರ ವರದಿ ಮಾಡಿದೆ.
ದೋಣಿಯಲ್ಲಿ ಬಂದದ್ದು ಕೇವಲ 10 ಮಂದಿ ಉಗ್ರರು, ಅವರಲ್ಲಿ 9 ಮಂದಿಯನ್ನು ಹತ್ಯೆ ಮಾಡಲಾಗಿದೆ ಮತ್ತು ಇನ್ನೊಬ್ಬ ಸೆರೆ ಸಿಕ್ಕಿದ್ದಾನೆ ಎಂಬ ಮುಂಬಯಿ ಪೊಲೀಸರ ಹೇಳಿಕೆಗೆ ನ್ಯೂಯಾರ್ಕ್ ಟೈಮ್ಸ್ ವರದಿ ವ್ಯತಿರಿಕ್ತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಟ್ರಾಲರ್ನಲ್ಲಿ ದೊರೆತ ಸಾಕ್ಷ್ಯಾಧಾರಗಳ ಆಧಾರದಲ್ಲಿ, ಈ ಸಂಚಿನಲ್ಲಿ ಇನ್ನೂ ಐವರು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಅವರಿನ್ನೂ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಮುಂಬಯಿಯ ದಾಳಿಯನ್ನು ಸಂಘಟಿಸಲು ನೆರವಾಗುವುದಕ್ಕಾಗಿ ಲಷ್ಕರ್ ಇ ತೋಯ್ಬಾದ 'ಕಮಾಂಡರ್' ಝಾಕಿ ಉರ್ ರಹಮಾನ್ ಲಖ್ವಿ ಎಂಬಾತ ಕಳೆದ ಮೂರು ತಿಂಗಳಿಂದ ಕರಾಚಿಯಲ್ಲಿ ಠಿಕಾಣಿ ಹೂಡಿದ್ದ ಎಂದಿರುವ ವರದಿ, ತಾಜ್ ಮತ್ತು ಒಬೆರಾಯ್ ಹೋಟೆಲ್ಗಳಲ್ಲಿ ಜನರನ್ನು ಸುತ್ತುವರಿಯುತ್ತಿದ್ದಾಗ ಅವರು ಸೆಲ್ ಫೋನ್ ಮೂಲಕ ಪಾಕಿಸ್ತಾನದಿಂದ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ಹೇಳಿದೆ. ಉಗ್ರರೊಂದಿಗೆ ಸಂಪರ್ಕದಲ್ಲಿ ಪಾಕಿಸ್ತಾನಿಯೊಬ್ಬನ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ಈ ವರದಿ ಪ್ರಕಟಿಸಿದೆ.
ಕರಾಚಿಯಿಂದ ಮುಂಬಯಿಗೆ 500 ಮೈಲಿಗಳ ಪ್ರಯಾಣ ಸಂದರ್ಭದಲ್ಲಿ ತಾವು ಅಪಹರಿಸಿದ್ದ ಮೀನುಗಾರಿಕಾ ದೋಣಿಯಲ್ಲಿ ಉಗ್ರರು ಸೆಟಲೈಟ್ ಫೋನ್ ಒಂದನ್ನು ಬಿಟ್ಟು ಹೋಗಿದ್ದು, ಅದರಲ್ಲಿ ಸಾಕಷ್ಟು ಆಧಾರಗಳು ಲಭ್ಯವಾಗಿವೆ.
ಈ ಫೋನಿನಲ್ಲಿ ಮುಂಬಯಿ ದಾಳಿಯ ರೂವಾರಿ ಎಂದು ಭಾವಿಸಲಾದ ಲಷ್ಕರ್ ಉಗ್ರಗಾಮಿ ಯೂಸುಫ್ ಮುಜಮ್ಮಿಲ್, ರಹಮಾನ್ ಮತ್ತಿತರ ಲಷ್ಕರ್ ಉಗ್ರರ ಫೋನ್ ನಂಬರುಗಳು ದೊರೆತಿವೆ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ. ಟ್ರಾಲರಿನಲ್ಲಿ ದೊರೆತ ಫೋನಿನಲ್ಲಿ ಮುಜಮ್ಮಿಲ್ನನ್ನು ಸಂಪರ್ಕಿಸಲು ಬಳಸಿದ ಸಂಖ್ಯೆ ಮತ್ತು ತಾಡ್ ಹಾಗೂ ಒಬೆರಾಯ್ ಹೋಟೆಲ್ಗಳಿಂದ ಮುಜಮ್ಮಿಲ್ನನ್ನು ಸಂಪರ್ಕಿಸಲು ಬಳಸಿದ ಫೋನ್ ಸಂಖ್ಯೆ ಪರಸ್ಪರ ತಾಳೆಯಾಗುತ್ತಿತ್ತು. |