ಮುಂಬೈ ಎಟಿಎಸ್ ಅಧಿಕಾರಿ ಹೇಮಂತರ ಕರ್ಕರೆ ಅವರು ಉಗ್ರರ ಗುಂಡಿನಿಂದಲೇ ಮೃತರಾಗಿದ್ದಾರೆ ಎಂದು ಗೃಹಸಚಿವ ಪಿ.ಚಿದಂಬರಂ ಲೋಕಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ. ಅಲ್ಲದೆ, ಈ ಕುರಿತು ಶಂಕೆಗಳು ವ್ಯಕ್ತವಾಗಿರುವುದು ವಿಶಾದನೀಯ ಎಂದು ಹೇಳಿದರು.ನವೆಂಬರ್ 26ರಂದು ಮುಂಬೈಯಲ್ಲಿ ನಡೆದ ದಾಳಿಯ ವೇಳೆ ಉಗ್ರರ ಗುಂಡಿಗೆ ಬಲಿಯಾದ ಕರ್ಕರೆ ಸಾವಿನ ಕುರಿತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಎ.ಆರ್. ಅಂತುಳೆ ಅವರು ಶಂಕೆ ವ್ಯಕ್ತಪಡಿಸಿದ್ದು, ಕರ್ಕರೆ ಸಾವಿನ ಹಿಂದೆ ಫಿತೂರಿಯ ಅನುಮಾನ ವ್ಯಕ್ತಪಡಿಸಿ ಈ ಕುರಿತು ತನಿಖೆಗೆ ಒತ್ತಾಯಿಸಿದ್ದರು.ಅಂತುಳೆ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು ಅಂತುಳೆ ಹೇಳಿಕೆ ಕುರಿತು ಪ್ರಧಾನಿಯವರಿಂದ ಸ್ಪಷ್ಟನೆ ಬಯಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಸರ್ಕಾರ ಈ ಕುರಿತು ಅಧಿವೇಶನದ ಮುಕ್ತಾಯಕ್ಕೆ ಮುನ್ನ ಹೇಳಿಕೆ ನೀಡುವುದಾಗಿ ತಿಳಿಸಿತ್ತು.ಲೋಕಸಭೆಯಲ್ಲಿ ಹೇಳಿಕೆ ನೀಡಿದ ಚಿದಂಬರಂ, ಅಂತುಳೆ ಸಿದ್ಧಾಂತವನ್ನು ಸಂಪೂರ್ಣ ಅಲ್ಲಗಳೆದಿದ್ದು, ಅ ದುರ್ದಿನದಂದು ಕರ್ಕರೆ ಅವರು ಕಾಮಾ ಆಸ್ಪತ್ರೆಗೆ ತೆರಳಿರುವ ವಿಚಾರಕ್ಕೆ ಇನ್ಯಾವುದೇ ಆಯಾಮಗಳಿಲ್ಲ ಎಂದು ನುಡಿದರು. ಅಲ್ಲದೆ ಕರ್ಕರೆ ಸಾವಿನ ಸಂದರ್ಭದ ಕುರಿತು ಪ್ರಶ್ನೆಗಳನ್ನು ಉದ್ಭವಿಸಿರುವುದು ವಿಶಾದನೀಯ ಎಂದು ಹೇಳಿದ್ದಾರೆ.ಅಂತುಳೆಯನ್ನು ಉಚ್ಚಾಟಿಸಬೇಕು ಎಂಬ ಎನ್ಡಿಎಯ ವಿರೋಧದ ನಡುವೆಯೇ ಮಾತನಾಡಿದ ಚಿದು, ಅಂದಿನ ಘಟನೆಗಳನ್ನು ಸದನದ ಮುಂದಿರಿಸಿದ್ದು, ಕರ್ಕರೆ ಮತ್ತು ಇತರರ ಸಾವಿನಲ್ಲಿ ಯಾವುದೇ ಫಿತೂರಿ ನಡೆದಿಲ್ಲ ಎಂದು ಹೇಳಿದರು. ತನಿಖೆ ಬೇಕಿಲ್ಲ ಸದನದಲ್ಲಿ ಗೃಹ ಸಚಿವರ ಹೇಳಿಕೆ ಹೊರಬೀಳುತ್ತಲೇ, ಯು ಟರ್ನ್ ಹೊಡೆದ ಅಂತುಳೆ, ಕರ್ಕರೆ ಸಾವಿನ ಕುರಿತು ಇದ್ದ ಸಂಶಯಗಳು ನಿವಾರಣೆಯಾಯಿತು ಎಂದು ಹೇಳಿದ್ದು, ಸಚಿವರು ಹೇಳಿಕೆ ನೀಡಿರುವ ಕಾರಣ ತನಿಖೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.ಕರ್ಕರೆಯನ್ನು ಯಾರು ಕೊಂದರೆಂದು ತಾನೆಂದಿಗೂ ಪ್ರಶ್ನಿಸಲೇ ಇಲ್ಲ ಎಂದು ಅಲ್ಲಗಳೆದ ಅಂತುಳೆ ತನ್ನ ಹೇಳಿಕೆಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.ತನ್ನನ್ನು ಮುತ್ತಿಕೊಂಡ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾನು ಕರ್ಕರೆಯನ್ನು ಯಾರು ಕೊಂದರೆಂದು ಕೇಳಿರಲಿಲ್ಲ. ಅವರು ಯಾಕೆ ಕಾಮಾ ಆಸ್ಪತ್ರೆಗೆ ತೆರಳಿದ್ದರು ಎಂದಷ್ಟೆ ಕೇಳಿದ್ದೆ ಎಂದು ಹೇಳಿದರು.ವಿವಾದಾಸ್ಪದ ಹೇಳಿಕೆ ಬಳಿಕ ಆತ್ಮವಿಶ್ವಾಸದಿಂದ ಬೀಗುವಂತೆ ತೋರುತ್ತಿದ್ದ ಅಂತುಳೆ, ಗೃಹ ಸಚಿವರ ಹೇಳಿಕೆ ಹೊರಬಿದ್ದ ಬಳಿಕ ಒಂದಿಷ್ಟು ಕಳೆಗುಂದಿದಂತೆ ಕಂಡುಬಂದರು. ನಡುನಡುವೆ ಪ್ರಶ್ನೆ ಕೇಳಿದ ಸುದ್ದಿಗಾರರ ಮೇಲೆ ರೇಗಿದರು. |