ತನ್ನ ಪಕ್ಷದ ಬೆಂಬಲಿಗರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ನಿವಾಸದ ಮುಂದೆ ಧರಣಿ ಕುಳಿತಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಶನಿವಾರ ಮುಂಜಾನೆ ಇದ್ದಕ್ಕಿದ್ದಂತೆ ತನ್ನ ಧರಣಿ ಹಿಂತೆಗೆದುಕೊಂಡಿದ್ದಾರೆ.ಮುಖ್ಯಮಂತ್ರಿಯವರ ದಕ್ಷಿಣ ಕೋಲ್ಕತಾ ನಿವಾಸದಿಂದ ಅಣತಿದೂರದಲ್ಲಿರುವ ಬಲ್ಲಿಗುಂಗೆ ಫಾರಿ ಎಂಬಲ್ಲಿ ಧರಣಿ ಕುಳಿತಿದ್ದ ಮಮತಾ, ಬಂಧನದಲ್ಲಿದ್ದ ಬೆಂಬಲಿಗರ ಬಿಡುಗಡೆಯಾಗದಿದ್ದರೂ ಯಾಕಾಗಿ ಧರಣಿ ಹಿಂತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ.ಈ ಕುರಿತು ಚಳುವಳಿ ಮುಂದುವರಿಯಲಿದೆ ಮತ್ತು ನಮಗೆ ಲಕ್ಷಾಂತರ ಮಂದಿಯ ಬೆಂಬಲ ಇದೆ ಎಂದು ಅವರು ಹೇಳಿದ್ದಾರೆ. ಮಮತಾ ಬೆಂಬಲಿಗೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಸಂಘಟನೆಗಳು ಶನಿವಾರ ಮುಂಜಾನೆ ಆರುಗಂಟೆಯಿಂದ 12 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿವೆ.ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಮತ್ತು ಅಟೋರಿಕ್ಷಾ ಚಾಲಕರ ಮೇಲೆ ಪೊಲೀಸರ ದೌರ್ಜನ್ಯವನ್ನು ಖಂಡಿಸಿ, ಪಕ್ಷದ ನಾಯಕರು ಶನಿವಾರ ನಗರದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಿದ್ದಾರೆ.ಏತನ್ಮಧ್ಯೆ, ಸಿಪಿಐ-ಎಂ ರಾಜ್ಯಕಾರ್ಯದರ್ಶಿ ಬಿಮನ್ ಬೋಸ್ ಅವರು ಮಮತಾರ ಚಳುವಳಿ ಭಯೋತ್ಪಾದನಾ ವಾತಾವರಣ ಹುಟ್ಟಿಸುವ ಹುನ್ನಾರ ಎಂದು ಆರೋಪಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ರಾಜ್ಯವನ್ನು ವಿಧ್ವಂಸದತ್ತ ತಳ್ಳುತ್ತಿರುವುದನ್ನು ಪ್ರತಿಭಟಿಸಿ ಸಿಪಿಐ-ಎಂ ಇಂದು ರಾಜ್ಯಾದ್ಯಂತ ಪ್ರದರ್ಶನಾ ಮೆರವಣಿಗೆ ನಡೆಸುವುದಾಗಿ ಹೇಳಿದ್ದಾರೆ. ಮಧ್ಯರಾತ್ರಿಯ ವೇಳೆಗೆ ರಾಜಕೀಯ ಪಕ್ಷವೊಂದು ಮುಖ್ಯಮಂತ್ರಿಯವರನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿರುವ ಘಟನೆ ಹಿಂದೆಂದೂ ನಡೆದಿರುವ ಉದಾಹರಣೆಗಳಿಲ್ಲ ಎಂದು ಬೋಸ್ ಹೇಳಿದ್ದಾರೆ. |