ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ಕಾರ್ಯಕ್ಷಮತೆ ಹೆಚ್ಚಿಸಲು, ಅಕ್ರಮ ನುಸುಳುವಿಕೆ ತಡೆಯಲು, ಉಗ್ರಗಾಮಿಗಳ ಚಲನವಲನವನ್ನು ಮಟ್ಟಹಾಕಲು ಗಡಿ ಭದ್ರತಾ ಪಡೆಯು ಇನ್ನಷ್ಟು ಪಡೆಗಳ ಬೆಟಾಲಿಯನ್ ಬೇಡಿಕೆ ಇರಿಸಿದೆ.ಗೃಹಸಚಿವ ಪಿ.ಚಿದಂಬರಂ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಗುವಾಹತಿಯಲ್ಲಿ ನಡೆದ ಉನ್ನತ ಭದ್ರತಾ ಸಭೆಯಲ್ಲಿ ಗಡಿ ಭದ್ರತಾ ಪಡೆಯು ಈ ಬೇಡಿಕೆಯನ್ನು ಇರಿಸಿರುವುದಾಗಿ ಅಧಿಕೃತ ಮೂಲಗಳು ಹೇಳಿವೆ. ಸಭೆಯಲ್ಲಿ ಗಡಿಯಾಚೆಗಿನ ಅಕ್ರಮ ನುಸುಳುವಿಕೆಯು ಪ್ರಮುಖ ವಿಚಾರವಾಗಿತ್ತು. ಈ ಪ್ರಸ್ತಾಪವನ್ನು ಗೃಹ ಸಚಿವ ಚಿದಂಬರಂ ಅವರು ಪರಿಗಣಿಸಿದ್ದಾರೆನ್ನಲಾಗಿದೆ. ಅಸ್ಸಾಂ ಮತ್ತು ಮೇಘಾಲಯಕ್ಕೆ ಅಂಟಿಕೊಂಡಿರುವ 577 ಕಿ.ಮೀ ಉದ್ದದ ಬಾಂಗ್ಲಾ ಗಡಿಯಲ್ಲಿ ಕೇವಲ 91 ಕಿ.ಮೀ ಉದ್ದಕ್ಕೆ ಮಾತ್ರ ಬೇಲಿ ಹಾಕಲಾಗಿದೆ. ಹಾಗೂ 129 ಕಿ.ಮೀ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ. ಈ ಭಾಗದಲ್ಲೇ ಹೆಚ್ಚಿನ ಅಕ್ರಮ ನುಸುಳುವಿಕೆಗಳು ಸಂಭವಿಸುತ್ತವೆ.ಮೇಘಾಲಯ ಮತ್ತು ಅಸ್ಸಾಮಿನ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪ್ರಸ್ತುತ 11 ಬೆಟಾಲಿಯನ್ಗಳನ್ನು ಮಾತ್ರ ನಿಯೋಜಿಸಲಾಗಿದೆ. ಮೇಘಾಲಯದ ಜೈನಿಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಬೇಲಿ ಕಾರ್ಯಕ್ಕೆ ಗ್ರಾಮಸ್ಥರ ವಿರೋಧವೂ ಸಭೆಯಲ್ಲಿ ವ್ಯಕ್ತವಾಗಿದೆ.ಬಾಂಗ್ಲಾದ ಗಡಿ ಭದ್ರತಾ ಪಡೆ ಬಿಡಿಆರ್, ನೈರುತ್ಯದಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ 75 ಕಡೆಗಳಲ್ಲಿ ಬೇಲಿ ಹಾಕಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇತ್ತೀಚೆಗೆ 46 ಸ್ಥಳಗಳಲ್ಲಿ ಕೆಲಸ ಮುಂದುವರಿಸಲು ಅನುವು ಮಾಡಿರುವುದಾಗಿ ಗಡಿಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. |