ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ, ವಿಶ್ವಸಂಸ್ಥೆಯ ನಿಷೇಧ ಭೀತಿಯಲ್ಲಿರುವ ಉಗ್ರಗಾಮಿ ಸಂಘಟನೆ ಜಮಾದ್-ಉದ್-ದಾವಾ ಹೊಸ ಹೆಸರಿನಿಂದ ಕಾರ್ಯಾಚರಿಸಲು ಮುಂದಾಗುತ್ತಿರುವುದರ ಹಿನ್ನೆಲೆಯಲ್ಲಿ, ಅದು ಯಾವುದೇ ಹೆಸರಿನಲ್ಲೇ ಕಾರ್ಯಾಚರಿಸಿದರೂ ಅದರ ವಿರುದ್ಧ ಕ್ರಮಕೈಗೊಳ್ಳುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿ ಎಂದು ಭಾರತ ಶುಕ್ರವಾರ ಹೇಳಿದೆ.
ಜಮಾತ್ ಉದ್ ದಾವಾ ಸಂಘಟನೆಯನ್ನು ವಿಶ್ವಸಂಸ್ಥೆ ನಿಷೇಧಿಸಿದೆ ಎಂಬುದನ್ನು ಒತ್ತಿಹೇಳಿದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಅಂತಾರಾಷ್ಟ್ರೀಯ ಬದ್ಥತೆ ಮತ್ತು ಸಮನ್ವಯತೆಗಳಿಗೆ ಅನುವರ್ತಿಸಲು ಪಾಕಿಸ್ತಾನ ವಿಫಲವಾದಲ್ಲಿ ವಿಶ್ವ ಸಮುದಾಯವು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
"ಲಷ್ಕರೆ-ಇ-ತೋಯ್ಬಾವನ್ನು ನಿಷೇಧಿಸಿದಾಗ ಅದು ಜಮಾತ್ ಉದ್ ದಾವಾ ಎಂದಬ ಹೆಸರು ಇರಿಸಿಕೊಂಡಿತು. ಇದೀಗ ಈ ಸಂಘಟನೆಯನ್ನೂ ನಿಷೇಧಿಸಲಾಗಿದೆ. ಅದೀಗ ಇನ್ನೊಂದು ಹೆಸರಿನಲ್ಲಿ ಕಾರ್ಯಾಚರಿಸಬಹುದಾಗಿದೆ. ಇದು ನಾವು ಗಮನಿಸಿದಂತೆ ಪಾಕಿಸ್ತಾನದಲ್ಲಿ ನಡೆಯುವ ಶೈಲಿಯಾಗಿದೆ" ಎಂದು ಪ್ರಣಬ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಈ ನಿಷೇಧಿತ ಸಂಘಟನೆಗಳು ಯಾವುದೇ ರೀತಿಯಲ್ಲಿ, ಯೂವುದೇ ರೂಪದಲ್ಲಿ, ಯಾವುದೇ ಹೆಸರಿನಲ್ಲಿ ಚಟುವಟಿಕೆ ನಡೆಸದಂತೆ ತಡೆಯುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿ ಎಂದವರು ಹೇಳಿದರು.
ಜಮಾತ್ ಉದ್ ದಾವಾ ತನ್ನ ಹೆಸರನ್ನು 'ತೆಹ್ರೀಕ್-ಇ-ಹರ್ಮತ್-ಇ-ರಸೂಲ್'(ದೇವ ಮರ್ಯಾದೆಯ ರಕ್ಷಣೆಗಾಗಿ ಚಳುವಳಿ) ಎಂದು ಬದಲಿಸಿಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ದಿಗ್ಬಂಧನ ಹೇರಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನವು ನಿಯಂತ್ರಣಗಳನ್ನು ಹೇರಬಹುದು ಎಂಬ ಕಾರಣದ ಹಿನ್ನೆಲೆಯಲ್ಲಿ ಜಮಾತ್ ಈ ಕ್ರಮಕ್ಕೆ ಮುಂದಾಗಿದೆ. |