ಪೂಂಛ್: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯ ಮೆಂಧೇರ್ ಪ್ರದೇಶದಲ್ಲಿ ಕಳೆದ 40 ಗಂಟೆಗಳಿಂದ ನಡೆಯುತ್ತಿರುವ ನಿರಂತರ ಗುಂಡಿನ ಚಕಮಕಿಯಲ್ಲಿ ವಿಶೇಷ ಪೊಲೀಸ್ ಅಧಿಕಾರಿ(ಎಸ್ಪಿಒ) ಹಾಗೂ ಜೈಶ್-ಇ-ಮೊಹಮ್ಮದ್ ಸಂಘಟನೆಯ ಕಮಾಂಡರ್ ಅಬು ದಾವುದ್ ಶನಿವಾರ ಹತರಾಗಿದ್ದಾರೆ.
ಉಗ್ರರೊಂದಿಗೆ ಎನ್ಕೌಂಟರ್ ನಡೆಯುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ನರೇಶ್ ಕುಮಾರ್ ಅವರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಅವರು ಅವಿತು ಕುಳಿತಿದ್ದ ಉಗ್ರನೊಬ್ಬನನ್ನು ಬಂಧಿಸಲು ಅಣಿಯಾಗುತ್ತಿರುವಂತೆ ಅವರ ಮೇಲೆ ಉಗ್ರರು ಗುಂಡೆಸೆದಿದ್ದಾರೆ.
ನಿರಂತರ ಗುಂಡಿನ ಚಕಮಕಿಯಿಂದ ಇದುವರೆಗೆ ಇಬ್ಬರು ಸೈನಿಕರು ಮತ್ತು ನಾಲ್ವರು ಉಗ್ರರು ಸಾವಿಗೀಡಾಗಿದ್ದಾರೆ. ಸೈನಿಕರ ದೇಹವು ಗುಂಡು ನಿರೋಧಕ ಕವಚ ರಹಿತವಾಗಿ ಕಂಡು ಬಂದಿದೆ. ಮತ್ತು ಅವರ ರೈಫಲ್ಗಳು ಕಾಣೆಯಾಗಿವೆ.
ಅರಣ್ಯದಲ್ಲಿ ಅವಿತಿರುವ ಉಗ್ರರನ್ನು ಮಟ್ಟಹಾಕಲು ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸುಮಾರು 2,000 ಭದ್ರತಾ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ. ದಟ್ಟಾರಣ್ಯದ ದುರ್ಗಮ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಸ್ವಾಭಾವಿಕ ಗುಹೆಗಳು ಉಗ್ರರಿಗೆ ಸುರಕ್ಷಿತವಾಗಿ ಅಡಗಿಕೊಳ್ಳಲು ಅವಕಾಶ ನೀಡಿವೆ. ಗ್ರೆನೇಡ್ಗಳು ಪೊದರುಗಳಲ್ಲಿ ಸಿಲುಕಿಕೊಳ್ಳುವ ಕಾರಣ ಪರಿಣಾಮಕಾರಿ ದಾಳಿಗೂ ಅಡ್ಡಿಯಾಗುತ್ತಿದೆ.
ಜನವರಿ ಒಂದರಂದು ನಸುಕಿನ ಆರು ಗಂಟೆಯ ವೇಳೆಗೆ ಗುಂಡಿನ ಚಕಮಕಿ ಆರಂಭಗೊಂಡಿದ್ದು, ಒಂದು ಗಂಟೆಯ ಬಳಿಕ ಇಬ್ಬರು ಸೈನಿಕರು ಹತರಾಗಿದ್ದರು. ಸೇನೆಯು ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ರಾತ್ರಿಯ ವೇಳೆಗೆ ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿತ್ತು.
|