ಬಂಧೂಕು ಹಿಡಿಯುವವರೊಂದಿಗೆ ಸರ್ಕಾರವು ಎಂದಿಗೂ ರಾಜಿಮಾಡಿಕೊಳ್ಳದು ಎಂದು ಶನಿವಾರ ಹೇಳಿರುವ ಪ್ರಧಾನಿ ಮನಮೋಹನ್ ಸಿಂಗ್, ರಾಷ್ಟ್ರದಲ್ಲಿ ಭಯೋತ್ಪಾದನೆಯನ್ನು ಬುಡಸಹಿತ ಕಿತ್ತೊಗೆಯಲು ಸರ್ಕಾರ ಯಾವುದೇ ಕ್ರಮಕ್ಕೂ ಹಿಂಜರಿಯದು, ಆದರೆ ಶಸ್ತ್ರಾಸ್ತ್ರಗಳನ್ನು ತೊರೆಯುವವರೊಂದಿಗೆ ಮಾತುಕತೆಗೆ ಸರ್ಕಾರ ಸದಾ ಮುಕ್ತವಾಗಿದೆ ಎಂದು ಹೇಳಿದ್ದಾರೆ." ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲ್ವಾದ ಚಿಂತೆಯ ವಿಚಾರ. ಸರ್ಕಾರವು ಭಯೋತ್ಪಾದನೆಯೊಂದಿಗೆ ರಾಜಿ ಮಾಡಿಕೊಳ್ಳದು" ಎಂದು ಪ್ರಧಾನಿ ಹೇಳಿದ್ದಾರೆ. ಅವರು ಶಿಲ್ಲಾಂಗ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು." ಆರಂಭದಲ್ಲಿ ಸ್ವಲ್ಪ ಹಿನ್ನೆಡೆಯುಂಟಾಗಬಹುದು, ಆದರೆ ನಾವಿದನ್ನು ಮಟ್ಟಹಾಕುತ್ತೇವೆ. ರಾಷ್ಟ್ರದಲ್ಲಿ ಭಯೋತ್ಪಾನೆಯನ್ನು ಬುಡಸಹಿತ ಕಿತ್ತುಹಾಕಲು ಯಾವುದೇ ಮಟ್ಟಕ್ಕೆ ಹೋಗಲೂ ಸರ್ಕಾರ ಸಿದ್ಧ" ಎಂದು ಸಿಂಗ್ ಅವರು ಮುಂಬೈ, ದೆಹಲಿ ಮತ್ತು ಅಸ್ಸಾಂಗಳಲ್ಲಿನ ಸ್ಫೋಟಗಳನ್ನು ಪ್ರಸ್ತಾಪಿಸುತ್ತಾ ನುಡಿದರು.ನಿಷೇಧಿತ ಉಲ್ಫಾದೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿರಿಸುವುದು ಅವರಿಗೆ ಮುಕ್ತವಾಗಿರುವ ದಾರಿ. ಎಲ್ಲಾ ಗಲಭೆ ನಿರತರು ಅರಿತುಕೊಳ್ಳಬೇಕು. ಯಾರೇ ಆದರೂ, ಅವರ ನೈಜ ಇಲ್ಲವೆ ಊಹೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಂಧೂಕು ಬಳಕೆಯ ನಂಬಿಕೆ ಇರಿಸಿಕೊಂಡರೆ, ಅಂತವರೊಂದಿಗೆ ಎಂದಿಗೂ ನಾವು ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ನುಡಿದರು.ಹಿಂಸಾನಿರತರು ಶಸ್ತ್ರಾಸ್ತ್ರ ಕೆಳಗಿರಿಸಿದರೆ ಮಾತ್ರ, ಯಾರೇ ಆದರೂ, ಅವರು ಭಾರತೀಯ ಪ್ರಜೆಗಳೆಂಬ ನೆಲೆಯಲ್ಲಿ ಅವರೊಂದಿಗೆ ಮಾತಾಡಲು ಸಿದ್ಧ ಎಂದು ಪ್ರಧಾನಿ ಹೇಳಿದ್ದಾರೆ.ಇದೇ ವೇಳೆ ಮುಂಬೈ ದಾಳಿಯ ರೂವಾರಿಗಳನ್ನು ಭಾರತಕ್ಕೊಪ್ಪಿಸುವಂತೆ ಪ್ರಧಾನಿ ಅವರು ಪಾಕಿಸ್ತಾನವನ್ನು ಒತ್ತಾಯಿಸಿದರು. ಯುದ್ಧ ಪರಿಹಾರವಲ್ಲ. ಆದರೆ ಪಾಕಿಸ್ತಾನ ಮುಂಬೈ ದಾಳಿಯ ರೂವಾರಿಗಳನ್ನು ಭಾರತದಲ್ಲಿ ವಿಚಾರಿಸಲು ಅವರನ್ನು ಒಪ್ಪಿಸಬೇಕು ಎಂದು ಸಿಂಗ್ ನುಡಿದರು.ಜಾಗತಿಕ ಆರ್ಥಿಕ ಕುಸಿತ ಮತ್ತು ಭಯೋತ್ಪಾದನೆ- ಇವೆರಡು ಭಾರತ ಇಂದು ಎದುರಿಸುತ್ತಿರುವ ಎರಡು ಅತಿದೊಡ್ಡ ಸವಾಲುಗಳು ಎಂದು ಅವರು ಹೇಳಿದರು.ಅವರು ಇಲ್ಲಿಗೆ 96ನೆ ವಿಜ್ಞಾನ ಕಾಂಗ್ರೆಸ್ ಉದ್ಘಾಟನೆಗೆ ಆಗಮಿಸಿದ್ದಾರೆ. |