ಯುದ್ಧ ಸಾಧ್ಯತೆಯನ್ನು ಬದಿಗೆ ತಳ್ಳಿರುವ ಭಾರತವು ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡಗಳನ್ನು ಹೇರಲು ಅಮೆರಿಕಾದ ಮೂಲಕ ಪ್ರಯತ್ನಿಸುತ್ತಿದ್ದು, ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಸಹಕಾರವಿರುವ ಬಗ್ಗೆ ಸಾರಿ ಹೇಳುವ ಸಾಕ್ಷ್ಯಗಳನ್ನು ಹೊಂದಿದೆ ಎಂದು ಗೃಹಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.
ಜೀವಂತವಾಗಿ ಸೆರೆ ಸಿಕ್ಕಿರುವ ಉಗ್ರ ಕಸಬ್ನ ಡಿಎನ್ಎ ಟೆಸ್ಟ್ ಮಾಡಿದಾಗ ಆತನ ತಂದೆ ಪಾಕಿಸ್ತಾನದವ ಎಂದು ನಾವು ರುಜುವಾತುಪಡಿಸಬಲ್ಲೆವು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಆ ಮೂಲಕ ಭಾರತವು ಪುರಾವೆಗಳ ಸಂಗ್ರಹದಲ್ಲಿ ಹಲವು ಮಜಲುಗಳನ್ನು ತಲುಪಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಮುಂಬೈ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನ ಪ್ರಜೆಗಳು ಹಾಗೂ ಅಲ್ಲಿನ ಸರಕಾರಿ ಸಂಸ್ಥೆಗಳಿರುವ ಬಗ್ಗೆ ಭಾರತ ಹೊಂದಿರುವ ಸಾಕ್ಷ್ಯಗಳನ್ನು ಹೊತ್ತು ಮುಂದಿನ ವಾರ ಗೃಹಸಚಿವ ಪಿ. ಚಿದಂಬರಂ ಅಮೆರಿಕಾಕ್ಕೆ ತೆರಳಲಿದ್ದಾರೆ.
ಅಮೆರಿಕಾ ಮತ್ತು ಭಾರತವು ಮುಂಬೈ ದಾಳಿಯ ವಿಚಾರದಲ್ಲಿ ತನಿಖೆಗೆ ಪರಸ್ಪರ ಸಹಕಾರ ನೀಡುತ್ತಿವೆ ಎಂದೂ ಚಿದಂಬರಂ ತಿಳಿಸಿದ್ದಾರೆ. ಪಾಕಿಸ್ತಾನ ಹೇಳುತ್ತಿರುವಂತೆ ದಾಳಿಯ ಹಿಂದೆ ಇರುವವರು ದೇಶರಹಿತರಲ್ಲ. ಅವರು ಪಾಕಿಸ್ತಾನದವರೇ ಎಂಬುದಕ್ಕೆ ನಮ್ಮಲ್ಲಿ ಬೇಕಾದಷ್ಟು ಸಾಕ್ಷ್ಯಗಳಿವೆ. ಅದನ್ನು ಅಮೆರಿಕಾದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಚಿದಂಬರಂ ತಿಳಿಸಿದರು.
ಭಾರತ ನೀಡಲಿರುವ ಸಾಕ್ಷ್ಯಗಳನ್ನು ಆಧರಿಸಿ ಅಮೆರಿಕಾವು ಉಗ್ರರನ್ನು ಬಂಧಿಸುವಂತೆ ಪಾಕಿಸ್ತಾನಕ್ಕೆ ಬೇಡಿಕೆಯಿಡಲಿದೆ. ಈಗಾಗಲೇ ಮುಂಬೈಗೆ ಭೇಟಿ ನೀಡಿರುವ ಅಮೆರಿಕಾದ ತನಿಖಾ ತಂಡ ಪಾಕಿಸ್ತಾನ ಸೇನೆ ಮತ್ತು ಐಎಸ್ಐ ಕೈವಾಡವಿರುವುದನ್ನು ಕಂಡುಕೊಂಡಿದ್ದು, ಪಾಕಿಸ್ತಾನದ ಜತೆ ಹೊಂದಿರುವ ಸಂಪರ್ಕಗಳ ಬಗ್ಗೆ ಪುರಾವೆಗಳು ಸಿಕ್ಕಿವೆ. ಲಷ್ಕರ್ ಇ ತೊಯ್ಬಾ ಸಂಘಟನೆಯ ಜತೆ ಇತರರು ಮಾತುಕತೆ ನಡೆಸಿದ ವಿವರಗಳು ಕೂಡ ಲಭ್ಯವಿರುವುದರಿಂದ ಪಾಕ್ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಲಿದೆ ಎಂದೂ ತಿಳಿದು ಬಂದಿದೆ.
|