ಎಲ್ಟಿಟಿಇ ಪ್ರಭಾವವನ್ನು ಶ್ರೀಲಂಕಾ ಸರಕಾರ ಕುಗ್ಗಿಸುತ್ತಾ ಅದರ ರಾಜಕೀಯ ರಾಜಧಾನಿಯನ್ನು ವಶಪಡಿಸಿಕೊಂಡ ಬೆನ್ನಲ್ಲೇ 'ಪ್ರಭಾಕರನ್ ಸೆರೆ ಸಿಕ್ಕಲ್ಲಿ ಭಾರತಕ್ಕೆ ಹಸ್ತಾಂತರಿಸಬೇಕು' ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಎಲ್ಟಿಟಿಇ ವಶದಲ್ಲಿದ್ದ ಅದರ ರಾಜಕೀಯ ರಾಜಧಾನಿ ಕಿಲಿನೊಚ್ಚಿಯನ್ನು ಶ್ರೀಲಂಕಾ ಸೇನೆಯು ನಿನ್ನೆಯಷ್ಟೇ ಸಂಪೂರ್ಣ ವಶಕ್ಕೆ ತೆಗೆದುಕೊಂಡಿತ್ತು. ಆದರೆ ಅದಕ್ಕೆ ಮೊದಲೇ ಎಲ್ಟಿಟಿಇ ತನ್ನ ನೆಲೆಗಳನ್ನು ಸ್ಥಳಾಂತರಿಸಿತ್ತು ಎಂದು ಅದು ಹೇಳಿಕೊಂಡಿದ್ದು, ಈ ಹಿನ್ನಲೆಯಲ್ಲಿ ನಮ್ಮ ಕಡೆ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ ಎಂದಿದೆ. ಇದೀಗ ಸೇನೆಯು ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅಡಗಿಕೊಂಡಿದ್ದಾನೆ ಎನ್ನಲಾಗಿರುವ ಮಲ್ಲೈತಿವು ಪ್ರದೇಶದ ಮೇಲೆ ದಾಳಿ ಆರಂಭಿಸಿದೆ. ಹಾಗಾಗಿ ಸೆರೆ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಸೆರೆ ಸಿಕ್ಕಿದಲ್ಲಿ ಆತನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ಪ್ರಭಾಕರನ್ ಜೀವಂತವಾಗಿ ಸೆರೆ ಸಿಕ್ಕಲ್ಲಿ ಭಾರತಕ್ಕೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ವಕ್ತಾರ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಅವನೊಬ್ಬ ಕೊಲೆಗಾರ. ಅವನನ್ನು ನಮ್ಮ ವಶಕ್ಕೊಪ್ಪಿಸಿದರೆ ತುಂಬಾ ಸಂತೋಷ. ನಾವು ಆತನನ್ನು ಕಾನೂನು ಕ್ರಮಗಳ ಪ್ರಕಾರ ಶಿಕ್ಷೆಗೊಳಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
|