ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಜನವರಿ 1ರಂದು ನಸುಕಿನ ವೇಳೆ ಆರಂಭವಾಗಿರುವ ಗುಂಡಿನ ಚಕಮಕಿ ಭಾನುವಾರವೂ ಮುಂದುವರಿದಿದ್ದು, ಇದುವರೆಗೆ ಮೂವರು ಸೈನಿಕರು ಸಾವನ್ನಪ್ಪಿದ್ದು ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸೇನಾ ಕಾರ್ಯಾಚರಣೆ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ರಾತ್ರಿಯಿಂದ ತಟಸ್ಥಗೊಂಡಿದ್ದ ಕಾಳಗ ಇಂದು ಬೆಳಿಗ್ಗೆ ಮತ್ತೆ ಆರಂಭವಾಗಿದೆ. ಸೇನೆ ಹಾಗೂ ಪೊಲೀಸರು ಅವಿರತ ಶ್ರಮವಹಿಸುತ್ತಿದ್ದು ಗುಹೆಗಳಲ್ಲಿ ಅಡಗಿ ಕುಳಿತಿರುವ ಉಗ್ರರನ್ನು ಸದೆ ಬಡಿಯಲು ಯತ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ದಟ್ಟ ಮಂಜಿನ ಕಾರಣದಿಂದ ಹೋರಾಟಕ್ಕೆ ಹಿನ್ನಡೆಯುಂಟಾಗುತ್ತಿದೆ. ಗುಹೆಗಳಿಗೆ ದಾಳಿ ಮಾಡಿ ಅಡಗಿರುವ ಉಗ್ರರನ್ನು ಕೊಂದು ಹಾಕುವುದೇ ಪ್ರಮುಖವಾಗಿದ್ದು, ಇಲ್ಲಿ ಸುಮಾರು 10 ಉಗ್ರರು ಅವಿತಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಜೈಶ್ ಇ ಮೊಹಮ್ಮದ್, ಆಲ್ ಬದ್ರ್ ಮತ್ತು ಲಷ್ಕರ್ ಇ ತೊಯ್ಬಾ ಸಂಘಟನೆಯ ಅಗ್ರ ಕಮಾಂಡರ್ಗಳು ಇಲ್ಲಿ ಸಿಕ್ಕಿ ಬಿದ್ದಿರುವ ಸಂಶಯಗಳಿದ್ದು ಸೇನೆ ಅವರನ್ನು ಬಗ್ಗು ಬಡಿಯುತ್ತಿದೆ.
ಆ ಜಾಗದಿಂದ ಯಾರನ್ನೂ ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ. ಅವಿತಿರುವ ಉಗ್ರರ ಮೃತದೇಹಗಳನ್ನು ಪಡೆದ ನಂತರವೇ ನಮ್ಮ ಕಾರ್ಯಾಚರಣೆ ಅಂತ್ಯಗೊಳ್ಳಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ದಟ್ಟ ಅರಣ್ಯ ಪ್ರದೇಶದಲ್ಲಿ ಈ ಕಾಳಗ ನಡೆಯುತ್ತಿರುವ ಕಾರಣ ಉಗ್ರರ ಇರುವಿಕೆಯನ್ನು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸೈನಿಕರು ಹಾಗೂ ಪೊಲೀಸರು ಸ್ಥಳದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ನಡುವೆ ಗ್ರೆನೇಡ್ ದಾಳಿಗೆ ಗಿಡ ಮರಗಳು ಅಡ್ಡ ಸಿಗುತ್ತಿವೆ. ನೈಸರ್ಗಿಕ ಗುಹೆಗಳು ಉಗ್ರರಿಗೆ ಅಡಗುದಾಣಗಳಾಗಿ ಮಾರ್ಪಾಡಾಗಿದೆ ಎನ್ನಲಾಗಿದೆ.
|