ನವದೆಹಲಿ: ಮುಂಬೈಯಲ್ಲಿ ಉಗ್ರರು ನವೆಂಬರ್ 26ರಂದು ನಡೆಸಿರುವ ನರಮೇಧದ ಕುರಿತು ಭಾರತವು ಪಾಕಿಸ್ತಾನಕ್ಕೆ ಪುರಾವೆಯನ್ನು ಒದಗಿಸಿರುವುದಾಗಿ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಪಾಕಿಸ್ತಾನದ ಹೈಕಮಿಷನರ್ಗೆ ಈ ಪುರಾವೆಗಳನ್ನು ಒದಗಿಸಿರುವುದಾಗಿ ಅವರು ನುಡಿದರು. ಅಲ್ಲದೆ ಈ ಸಾಕ್ಷ್ಯಾಧಾರಗಳನ್ನು ಭಾರತ ವಿಶ್ವಾದ್ಯಂತ ತನ್ನ ಇತರ ಸ್ನೇಹಿತ ರಾಷ್ಟ್ರಗಳಿಗೂ ರವಾನಿಸಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಣಬ್ ಮುಖರ್ಜಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರು ಪಾಕಿಸ್ತಾನ ಹೈಕಮಿಷನರ್ ಶಾಹಿದ್ ಮಲಿಕ್ರಿಗೆ ಸಾಕ್ಷ್ಯಾಧಾರಗಳನ್ನು ಒಪ್ಪಿಸಿದ್ದಾರೆ.
ಪಾಕಿಸ್ತಾನವು ತನ್ನ ದ್ವಿಪಕ್ಷೀಯ ಬದ್ಧತೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
"ಪಾಕಿಸ್ತಾನಕ್ಕೂ ಉಗ್ರರಿಗೂ ಇರುವ ಸಂಪರ್ಕಗಳನ್ನು ನೀಡಲಾಗಿದೆ. ಪಾಕಿಸ್ತಾನವು ಇತರ ತನಿಖೆಗಳನ್ನು ಕೈಗೊಳ್ಳಬೇಕು" ಎಂದು ಭಾರತ ನಿರೀಕ್ಷಿಸುವುದಾಗಿ ಅವರು ನುಡಿದರು.
ಪುರಾವೆಗಳಲ್ಲಿ ಬಂಧಿತ ಉಗ್ರನ ತಪ್ಪೊಪ್ಪಿಗೆ, ಉಗ್ರರ ಸೆಟಲೈಟ್ ಫೋನ್ ಸಂಭಾಷಣೆ ಹಾಗೂ ಇತರ ದಾಖಲೆಗಳು ಸೇರಿವೆ ಎನ್ನಲಾಗಿದೆ. |