ಜಮ್ಮು ಕಾಶ್ಮೀರದ ಪೂಂಛ್ ಪ್ರಾಂತ್ಯದ ದಟ್ಟಾರಣ್ಯದಲ್ಲಿ ನಡೆಯುತ್ತಿರುವ ಗುಂಡಿನ ಕಾಳಗ ಐದನೆ ದಿವಸಕ್ಕೆ ಕಾಲಿರಿಸಿದೆ. ಈ ಗುಂಡಿನ ಚಕಮಕಿಯಲ್ಲಿ ಇದೀಗಾಗಲೇ ನಾಲ್ವರು ಉಗ್ರರು ಮತ್ತು ಮೂವರು ಸೈನಿಕರು ಸೇರಿದಂತೆ ಒಟ್ಟು ಏಳು ಮಂದಿ ಹತರಾಗಿದ್ದಾರೆ.
ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಜನವರಿ ಒಂದರಿಂದ ಗುಂಡಿನ ಕಾಳಗ ನಡೆಯುತ್ತಿದೆ. ಪೂಂಛ್ನ ಮೆಂಧಾರ್ ಎಂಬಲ್ಲಿನ ಪಾಟೀಲ್ ತಾರ್ ಬೆಟ್ಟವನ್ನು ಸೇನೆಯು ವಶಪಡಿಸಿಕೊಂಡಿದೆ. ಇಲ್ಲಿ ಪ್ರಮುಖ ಉಗ್ರರ ಅಡಗುತಾಣವಿದೆ ಎಂಬ ಖಚಿತ ಮಾಹಿತಿಯಾಧಾರದಲ್ಲಿ ಸೇನಾಪಡೆಯು ಮಿಂಚಿನ ಕಾರ್ಯಾಚರಣೆ ಆರಂಭಿಸಿತ್ತು.
ಗುಂಡಿನ ಕಾದಾಟದ ವೇಳೆ ಜೈಶೆ-ಇ-ಮಹಮ್ಮದ್ ಕಮಾಂಡರ್ ಒಬ್ಬ ಹತನಾಗಿದ್ದಾನೆ. ಜೈಶ್ ಮತ್ತು ಲಷ್ಕರೆಯ ಕಮಾಂಡರ್ಗಳು ಇಲ್ಲಿ ಅವಿತಿದ್ದಾರೆನ್ನಲಾಗಿದೆ.
ಉಗ್ರರೊಂದಿಗಿನ ಕಾಳಗದ ವೇಳೆಗೆ ವಿಶೇಷ ಪೊಲೀಸ್ ಅಧಿಕಾರಿ ನರೇಶ್ ಕುಮಾರ್ ಹತರಾಗಿದ್ದಾರೆ. ದಟ್ಟಾರಣ್ಯದಲ್ಲಿ ಈ ಕಾಳಗ ನಡೆಯುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇಲ್ಲಿರುವ ನೈಸರ್ಗಿಕ ಗುಹೆಗಳಲ್ಲಿ ಉಗ್ರರು ಸುಲಭವಾಗಿ ಅವಿತುಕೊಳ್ಳಲು ಸಾಧ್ಯವಾಗುತ್ತಿದ್ದು, ಗಿಡಮರ ಪೊದೆಗಳು ದಟ್ಟವಾಗಿರುವ ಕಾರಣ ನಿರೀಕ್ಷೆಯಂತೆ ಗ್ರೆನೇಡುಗಳು ಸಿಡಿಯುತ್ತಿಲ್ಲ ಎಂದು ವರದಿಗಳು ಹೇಳಿವೆ. |