ಭಾರತವು ಜಾತ್ಯತೀತ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಯಾವುದೇ ಭಾಗದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕಿರುಕುಳ ಸಹಿಸಲಾಗದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನ್ಯಾಯಮೂರ್ತಿ ಮಾರ್ಖಾಂಡೇಯ ಕಟ್ಜು ಅವರು ಕಟಕ್ ಆರ್ಚ್ಬಿಶಪ್ ಚೀನಾಥ್ ಅವರು ಸಲ್ಲಿಸಿದ್ದ ಮನವಿಯೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಜರಂಗದಳದ ಕಾರ್ಯಕರ್ತರು ಒಳಗೊಂಡಿದ್ದಾರೆನ್ನಲಾಗಿರುವ ಕಂಧಮಲ್ ಹಿಂಸಾಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠವು ನ್ಯಾಯಮೂರ್ತಿಗಳಾದ ಕಟ್ಜು ಮತ್ತು ಪಿ. ಸದಾಶಿವಂ ಅವರನ್ನೊಳಗೊಂಡಿದೆ. ಒರಿಸ್ಸಾ ಸರ್ಕಾರವು ಕಂಧಮಲ್ ಹಿಂಸಾಚಾರದ ಬಲಿಪಶುಗಳಿಗೆ, ಧ್ವಂಸಗೈಯಲಾದ ಮತ್ತು ಹಾನಿಪಡಿಸಲಾಗಿರುವ ಪೂಜಾಸ್ಥಳಗಳಿಗೆ ಪರಿಹಾರ ನೀಡುತ್ತಿಲ್ಲ ಮತ್ತು ಹಿಂಸಾಚಾರದ ವೇಳೆ ಧ್ವಂಸಗೈಯಲಾಗಿರುವ ಬುಡಕಟ್ಟು ಕ್ರೈಸ್ತರ ಪೂಜಾಸ್ಥಳಗಳನ್ನು ಪುನರ್ನಿರ್ಮಾಣ ಮಾಡಲಾಗಿಲ್ಲ ಎಂದು ಮನವಿದಾರರ ವಕೀಲರು ನ್ಯಾಯಾಲಯದಲ್ಲಿ ಅರಿಕೆ ಮಾಡಿದರು.
ಆದರೆ, ಒರಿಸ್ಸಾ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಕೆ.ಕೆ.ವೇಣುಗೋಪಾಲ್ ಈ ಆರೋಪವನ್ನು ತಳ್ಳಿಹಾಕಿದ್ದು, ಸರ್ಕಾರವು ಸಾಕಷ್ಟು ಪರಿಹಾರ ನೀಡಿದೆ. ಅಲ್ಲದೆ ಬಲಿಪಶುಗಳ ಪುನರ್ವಸತಿಗಾಗಿ ಮತ್ತು ಪೂಜಾಸ್ಥಳಗಳ ನಿರ್ಮಾಣಕ್ಕಾಗಿ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂದು ನುಡಿದರು.
ಒರಿಸ್ಸಾದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸ್ವಾಮೀ ಲಕ್ಷ್ಮಣಾನಂದ ಸರಸ್ವತಿ ಹಾಗೂ ಇತರ ನಾಲ್ವರ ಕೊಲೆ ಪ್ರಕರಣದ ಬಳಿಕ ಕಂಧಮಲ್ನಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಕೊಲೆಯ ಹಿಂದೆ ಬಡುಕಟ್ಟು ಕ್ರೈಸ್ತರ ಕೈವಾಡವಿದೆ ಎಂದು ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಶಂಕೆ ವ್ಯಕ್ತಪಡಿಸಿದೆ.
ಅಲ್ಪಸಂಖ್ಯಾತರು ಮತ್ತು ಅವರ ಆಸ್ತಿಪಾಸ್ತಿಗಳ ಸುರಕ್ಷತೆಯ ಖಚಿತತೆಗೆ ಕೇಂದ್ರ ಹಾಗೂ ಒರಿಸ್ಸಾ ಸರ್ಕಾರಕ್ಕೆ ಆದೇಶ ನೀಡಿದ ನ್ಯಾಯಾಲಯ ಪ್ರಕರಣವನ್ನು ನಂತರದ ವಿಚಾರಣೆಗಾಗಿ ಮುಂದೂಡಿದೆ.
|