ಮುಂಬೈ ನರಮೇಧದ ಹಿಂದಿರುವವರನ್ನು ಭಾರತೀಯ ನ್ಯಾಯಾಲಯದ ಕಟಕಟೆಗೆ ತರುವುದು ತಮ್ಮ ಉದ್ದೇಶವಾಗಿದೆ ಎಂದು ಭಾರತ ಸೋಮವಾರ ಹೇಳಿದೆ." ಒಂದು ಕಮಾಂಡೋ ರೀತಿಯ ಕಾರ್ಯಾಚರಣೆಯನ್ನು ಪಾಕಿಸ್ತಾನದಲ್ಲಿ ಯಾರಿಗೂ ತಿಳಿಯದಂತೆ ನಡೆಸುವುದು ಅಸಾಧ್ಯ ಎಂಬುದನ್ನು ಮುಂಬೈ ದಾಳಿಯ ಪುರಾವೆಗಳು ಹೇಳುತ್ತವೆ" ಎಂದು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಹೇಳಿದ್ದಾರೆ." ಪಾಕಿಸ್ತಾನದ ಹೇಳಿಕೆಗಳು ನಮಗೆ ಬೇಕಿಲ್ಲ. ಅದು ಕಾರ್ಯಾಚರಿಸುವುದನ್ನು ನಾವು ಎದುರುನೋಡುತ್ತಿದ್ದೇವೆ. ಆದರೆ ಇಲ್ಲಿವರೆಗೆ ಅದರ ಯಾವುದೇ ಸುಳಿವಿಲ್ಲ" ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು. ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತ ಪುರಾವೆಗಳನ್ನು ಅವರು ಸೋಮವಾರ ಪಾಕಿಸ್ತಾನ ಹೈಕಮಿಷನರ್ರಿಗೆ ಹಸ್ತಾಂತರಿಸಿದ್ದಾರೆ." ತನಿಖೆಯ ವೇಳೆಗೆ ಲಭಿಸಿರುವ ಪುರಾವೆಗಳನ್ನು ನಾವು ಅವರಿಗೆ ನೀಡಿದ್ದೇವೆ. ದಾಳಿಯ ಹಿಂದಿನ ಕೈವಾಡವನ್ನು ಪಾಕಿಸ್ತಾನದತ್ತ ಬೆಟ್ಟು ಮಾಡುವ ಪುರಾವೆಗಳ ಕುರಿತು ಪಾಕಿಸ್ತಾನ ತನಿಖೆಮಾಡಬಹುದು ಮತ್ತು ಇದರ ಫಲಿತಾಂಶವನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು, ಮತ್ತು ನಮಗೆ ಕಾನೂನಿ ಸಹಾಯ ಒದಗಿಸುವ ಮೂಲಕ ತಪ್ಪಿತಸ್ಥರನ್ನು ಭಾರತೀಯ ಕಾನೂನಿ ಕಟಕಟೆಗೆ ತರಲು ಸಹಾಯ ಮಾಡಲಿದೆ" ಎಂಬುದಾಗಿ ಮೆನನ್ ತಿಳಿಸಿದರು.ಸಾರ್ಕ್ ಒಡಂಬಡಿಕೆ ಪ್ರಕಾರ ಮುಂಬೈದಾಳಿಕೋರರನ್ನು ಭಾರತಕ್ಕೆ ಒಪ್ಪಿಸುವ ಬದ್ಧತೆ ಪಾಕಿಸ್ತಾನದ್ದಾಗಿದೆ ಎಂದು ಮೆನನ್ ಪುನರುಚ್ಚರಿಸಿದರು.ಪಾಕಿಸ್ತಾನಕ್ಕೆ ಯಾವುದೇ ಸಮಯ ಮಿತಿಯನ್ನು ಹೇರಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೆನನ್, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪಾಕಿಸ್ತಾನವು ಈ ಕುರಿತು ನೈಜಕ್ರಿಯೆ ಕೈಗೊಳ್ಳುವುದನ್ನು ಭಾರತ ಎದುರು ನೋಡುತ್ತಿದೆ ಎಂದು ನುಡಿದರು. |