ಶನಿವಾರ ಯಶಸ್ವಿ ಶಸ್ತ್ರಕ್ರಿಯೆಗೊಳಗಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟವನ್ನು ತೆರವುಗೊಳಿಸಲಾಗಿದೆ. ಹೃದಯದ ರಕ್ತನಾಳಗಳಲ್ಲಿ ರಕ್ತಸಂಚಾರಕ್ಕೆ ತಡೆಯುಂಟಾಗಿದ್ದು, ಸಮಸ್ಯೆ ಎದುರಿಸುತ್ತಿದ್ದ ಪ್ರಧಾನಿಯವರಿಗೆ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಬೈಪಾಸ್ ಸರ್ಜರಿ ನಡೆಸಲಾಗಿತ್ತು.
"76ರ ಹರೆಯದ ಪ್ರಧಾನಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರೀಗ ಪ್ರಜ್ಞೆಗೆ ಮರಳಿದ್ದಾರೆ. ಅವರು ತನ್ನ ಕುಟುಂಬದ ಸದಸ್ಯರನ್ನು ಭೇಟಿಯಾಗಿದ್ದು, ಎಲ್ಲಾ ವೈದ್ಯರಿಗೆ ಅಭಿನಂದನೆಗಳನ್ನು ಸಲ್ಲಿಸಿದರು" ಎಂಬುದಾಗಿ ಅವರಿಗೆ ಶಸ್ತ್ರಕ್ರಿಯೆ ನಡೆಸಿರುವ ವೈದ್ಯರ ತಂಡದ ನೇತೃತ್ವ ವಹಿಸಿರುವ ಡಾ| ರಮಾಕಾಂತ್ ಪಾಂಡ ತಿಳಿಸಿದ್ದಾರೆ.
ಪ್ರಧಾನಿಯವರು ಸುಧಾರಿಸಿಕೊಳ್ಳುತ್ತಿರುವ ಸ್ಥಿತಿಯಿಂದ ಸಂತುಷ್ಟರಾಗಿರುವ ವೈದ್ಯರು, ಅವರಿಗೆ ಅಳವಡಿಸಿದ್ದ ಕೃತಕ ಉಸಿರಾಟವನ್ನು ಹಿಂತೆಗೆದಿದ್ದಾರೆ.
ಪ್ರಧಾನಿಯವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ, ಮತ್ತು ಕ್ಷಿಪ್ರವಾಗಿ ಚೇತರಿಸಿಕೊಳ್ಳುತ್ತಿದಾರೆ ಎಂದು ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.
'ರಿ-ಡೂ-ಬೈ-ಪಾಸ್' ಸರ್ಜರಿಯ ವಿಶೇಷ ತಜ್ಞರಾಗಿರುವ ಪಂಡಾ ಅವರು ಪ್ರಧಾನಿಯವರ ನಾಡಿ ಬಡಿತ, ರಕ್ತದೊತ್ತಡ, ದೇಹದ ಉಷ್ಟಾಂಶ ಮತ್ತು ಮೂತ್ರದ ಪ್ರಮಾಣವನ್ನು ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಧಾನಿಯವರು ಮೂರು ದಿನಗಳ ಕಾಲ ತುರ್ತು ನಿಗಾ ಘಟಕದಲ್ಲಿ ಇರಬೇಕಾಗಿದೆ. ಒಟ್ಟಾರೆಯಾಗಿ ಅವರು ಸುಮಾರು ಏಳರಿಂದ ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಹನ್ನೊಂದು ಮಂದಿಯನ್ನೊಳಗೊಂಡಿದ್ದ ವೈದ್ಯರ ತಂಡವು, ಶನಿವಾರ 11 ಗಂಟೆಗಳ ಸುದೀರ್ಘಕಾಲದ ಶಸ್ತ್ರಕ್ರಿಯೆ ನಡೆಸಿತ್ತು. |