ಮುಂಬೈ ದಾಳಿ ಕುರಿತಂತೆ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಪಾಕ್ ಇಬ್ಬಗೆಯ ನೀತಿಯೊಂದಿಗೆ ಸಮಸ್ಯೆಯನ್ನು ಕಗ್ಗಂಟುಗೊಳಿಸುತ್ತಿದ್ದರೆ, ಇದೀಗ ಭಾರತದ ಗುಪ್ತಚರ ಇಲಾಖೆ ಮತ್ತೊಂದು ಆಘಾತಕಾರಿ ಅಂಶವೊಂದನ್ನು ಬಯಲಿಗೆಳೆದಿದೆ.
ಮುಂಬೈ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮಿರ್ ಕಸಬ್ನ ಹತ್ಯೆಗೆ ಪಾಕ್ ಐಎಸ್ಐ ಸಂಚು ರೂಪಿಸಿರುವುದಾಗಿ ಭಾರತದ ವಿದೇಶಾಂಗ ಗುಪ್ತಚರ ಇಲಾಖೆ ಹಾಗೂ 'ರಾ' (ರಿಸರ್ಚ್ ಆಂಡ್ ಅನಾಲಿಸೀಸ್ ವಿಂಗ್) ಈ ಮಾಹಿತಿಯನ್ನು ಹೊರಗೆಡಹಿದೆ.
ಅಂತರ್ಜಾಲದ ಮೂಲಕ ನಡೆಸುತ್ತಿದ್ದ ಸಂಭಾಷಣೆಯ ಮೂಲಕ ಈ ಆಘಾತಕಾರಿ ಅಂಶವನ್ನು ಪತ್ತೆಹಚ್ಚಿರುವ ಗುಪ್ತಚರ ಇಲಾಖೆ, ಪಾಕಿಸ್ತಾನ ಫರಿದ್ಕೋಟ್ನ ನಿವಾಸಿಯಾಗಿರುವ ಅಜ್ಮಲ್ ಕಸಬ್ನನ್ನು ಹತ್ಯೆಗೈಯಲು ಪಾಕ್ನ ಐಎಸ್ಐ ಭೂಗತ ಪಾತಕಿ ದಾವೂದ್ ಇಬ್ರಾಹಿಂನಿಗೆ ಗುತ್ತಿಗೆ ನೀಡಿರುವುದಾಗಿ ಹೇಳಿದೆ.
ಈ ಕೃತ್ಯವನ್ನು ಮಾಡಲು ದಾವೂದ್ ತನ್ನ ಸಹೋದರನಾದ ಛೋಟಾ ಶಕೀಲ್ಗೆ ಹೊಣೆ ಒಪ್ಪಿಸಿದ್ದು, ಅದಕ್ಕಾಗಿ 15ಶಾರ್ಪ್ ಶೂಟರ್ಗಳ ತಂಡವೊಂದು ರಚನೆಯಾಗಿರುವುದಾಗಿಯೂ 'ರಾ' ವಿವರಿಸಿದೆ.
ಅರ್ಥರ್ ರೋಡ್ ಜೈಲಿನಿಂದ ಕಸಬ್ನನ್ನು ಮತ್ತೊಂದು ಸೆಲ್ಗೆ ಕರೆದೊಯ್ಯುವ ವೇಳೆಯಲ್ಲಿ ಹತ್ಯೆಗೈಯುವ ಸಂಚನ್ನು ರೂಪಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬದುಕುಳಿದಿರುವ ಏಕೈಕ ಉಗ್ರ ಕಸಬ್ ಜೀವ ರಕ್ಷಣೆಗಾಗಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಕಸಬ್ಗಾಗಿ ಮೂರು ಹಂತದ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸಿಸಿಟಿವಿ ಅಳವಡಿಸಿದ್ದು, ಸಬ್ ಇನ್ಸ್ಪೆಕ್ಟರ್ ರಾಂಕಿನ ಅಧಿಕಾರಿಗಳಿಗೆ ರಕ್ಷಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ.ಕಸಬ್ ರಕ್ಷಣೆ ವಿಚಾರ ಕುರಿತಂತೆ ಕೇವಲ ಐದು ಮಂದಿ ಅಧಿಕಾರಿಗಳನ್ನು ಹೊರತು ಪಡಿಸಿ ಬೇರೆ ಯಾರಿಗೂ ಆ ಮಾಹಿತಿ ಇಲ್ಲ. ಕಸಬ್ನನ್ನು ಈಗಲೂ ಅರ್ಥರ್ ರೋಡ್ ಜೈಲಿನಲ್ಲಿಯೇ ಇರಿಸಲಾಗಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ಕಸಬ್ನನ್ನು ಇರಿಸಿರುವ ಅರ್ಥರ್ ರೋಡ್ ಜೈಲಿನಲ್ಲಿಯೇ ದಾವೂದ್ ಗ್ಯಾಂಗ್ನ ಬಂಟರು(ಆರೋಪಿಗಳು) ಇದ್ದಿರುವುದರಿಂದ ಕಸಬ್ ಜೀವಕ್ಕೆ ಅಪಾಯ ಇದೆ ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. |