ಅಲ್ಪಸಂಖ್ಯಾತ ಮತ್ತು ಹಿಂದುಳಿದವರ ಕಲ್ಯಾಣ ಎಂದು ಬೊಬ್ಬಿಡುತ್ತಲೇ ಇದ್ದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, 2008-09ರ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ವೆಚ್ಚದ ಪ್ರಮಾಣದಲ್ಲಿ ಶೇ.40ರಷ್ಟನ್ನೂ ಉಪಯೋಗಿಸಿಯೇ ಇಲ್ಲ. ಮಾತ್ರವಲ್ಲ, ಸೋಮವಾರ ಅದು ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿನ ಅನುದಾನ ಹೆಚ್ಚಳ ಕೇವಲ 3 ಕೋಟಿ ರೂ. ಮಾತ್ರ.
ಕಳೆದ ವರ್ಷದ ಸಾಮಾನ್ಯ ಬಜೆಟ್ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯಕ್ಕೆ ಯೋಜನೆ ಮತ್ತು ಯೋಜನೇತರ ವೆಚ್ಚವಾಗಿ ಒಟ್ಟು 1,013.83 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಆದರೆ ಅದರಲ್ಲಿ ಖರ್ಚಾಗಿದ್ದು 664.38 ಕೋಟಿ ರೂ. ಮಾತ್ರ. ಪ್ರಣಬ್ ಮುಖರ್ಜಿ ಮಂಡಿಸಿದ ಮಧ್ಯಂತರ ಮುಂಗಡಪತ್ರದಲ್ಲಿ, ಈ ಅನುದಾನದ ಪ್ರಮಾಣವನ್ನು 2.67 ಕೋಟಿ ರೂ. ಹೆಚ್ಚಿಸಿ 1,016.50 ಕೋಟಿಗೆ ಏರಿಸಲಾಗಿದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸುಗಳಿಗೆ ಮೆರಿಟ್ ಆಧಾರಿತ ಸ್ಕಾಲರ್ಶಿಪ್ ಮುಂತಾದ, ಸಚಿವಾಲಯದ ಮುಂಚೂಣಿ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಆದರೆ, ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಹಾಗೂ ಅಲ್ಪಸಂಖ್ಯಾತರೇ ಹೆಚ್ಚಿರುವ ಜಿಲ್ಲೆಯಲ್ಲಿ ಬಹುಮುಖೀ ಅಭಿವೃದ್ಧಿ ಕಾರ್ಯಕ್ರಮಗಳ ಅನುದಾನವನ್ನು ಹೆಚ್ಚಿಸಲಾಗಿದೆ.
ಮೆಟ್ರಿಕ್ ನಂತರದ ಸ್ಕಾಲರ್ಶಿಪ್ ಅನುದಾನವನ್ನು 88.43 ಕೋಟಿ ರೂ.ಗಳಿಂದ 75.25 ಕೋಟಿಗೆ ಇಳಿಸಲಾಗಿದ್ದರೆ, ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಅನುದಾನವನ್ನು 70.72 ಕೋಟಿ ರೂ.ಗಳಿಂದ 82.30 ಕೋಟಿ ರೂ.ಗೆ ಏರಿಸಲಾಗಿದೆ.
ವಿಶೇಷವೆಂದರೆ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಪಂಗಡದವರಿಗೆ ಮೀಸಲಿಟ್ಟಿದ್ದ 838 ಕೋಟಿ ರೂ. ಅನುದಾನದಲ್ಲಿ ಕೂಡ ಸಚಿವಾಲಯವು ಇದುವರೆಗೆ ವಿನಿಯೋಗಿಸಿದ್ದು 523.16 ಕೋಟಿ ರೂ. ಮಾತ್ರ.
ಈ ಕುರಿತು ಜಾಹೀರಾತು ಪ್ರಚಾರ ನೀಡುವಲ್ಲಿನ ವಿಳಂಬ ಮತ್ತು ಸ್ಕಾಲರ್ಶಿಪ್ನಂತಹ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯಗಳು ಪಟ್ಟಿ ಸಲ್ಲಿಸುವಲ್ಲಿ ಮಾಡಿರುವ ವಿಳಂಬದಿಂದಾಗಿ ಈ ನಿಧಿಯ ಸಮರ್ಪಕ ಬಳಕೆ ಸಾಧ್ಯವಾಗಿಲ್ಲ ಎಂದು ಸಚಿವಾಲಯ ಸಮರ್ಥನೆ ನೀಡಿದೆ. |