ಗುವಾಹತಿ: ಅಸ್ಸಾಮಿನ ಅತಿ ಹೆಚ್ಚು ಪ್ರಸಾರದ ಪತ್ರಿಕೆ 'ಅಜಿ' ಸಂಪಾದಕ ಅನಿಲ್ ಮಜುಂದಾರ್ ಎಂಬವರನ್ನು ಅಪರಿಚಿತ ಬಂದೂಕುಧಾರಿಗಳು ಗುವಾಹತಿ ನಗರದ ನಡುಮಧ್ಯದಲ್ಲಿ ಗುಂಡಿಟ್ಟು ಕೊಂದಿದ್ದಾರೆ.
ಮಂಗಳವಾರ ರಾತ್ರಿ ಸುಮಾರು ಹತ್ತೂವರೆ ಗಂಟೆಯ ವೇಳೆಗೆ, ಅವರ ನಿವಾಸದ ಹೊರಗಡೆ ಸ್ವಯಂಚಾಲಿತ ಶಸ್ತ್ರಾಸ್ತ್ರ ಹೊಂದಿದ್ದ ವ್ಯಕ್ತಿಯು ಅತ್ಯಂತ ನಿಕಟವಾಗಿ ಗುಂಡುಹಾರಿಸಿರುವುದಾಗಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
"ಕಚೇರಿಯಿಂದ ಮರಳುತ್ತಿದ್ದ ಅನಿಲ್ ಅವರು ತನ್ನ ನಿವಾಸಕ್ಕೆ ಕಾಲಿಡಬೇಕೆನ್ನುವಷ್ಟರಲ್ಲಿ, ಕಾರಿನಲ್ಲಿ ಕಾದು ಕುಳಿತಿದ್ದ ಅಪರಿಚಿತ ಬಂದೂಕುಧಾರಿಗಳು ಅವರಮೇಲೆ ಯದ್ವಾತದ್ವ ಗುಂಡುಹಾರಿಸಿದರು ಎಂದು ಎಂಬುದಾಗಿ ಪೊಲೀಸಧಿಕಾರಿ ಜಿ.ಪಿ. ಸಿಂಗ್ ತಿಳಿಸಿದ್ದಾರೆ.
ಅವರ ಎದೆಯಲ್ಲಿ ಸುಮಾರು ಏಳು ಗುಂಡುತಗುಲಿದ ಗಾಯಗಳಿದ್ದವು ಎಂದು ಅವರು ಹೇಳಿದ್ದಾರೆ. ಈ ದಾಳಿ ಯಾರು ನಡೆಸಿದ್ದಾರೆ ಎಂಬ ಸುಳಿವು ಇನ್ನೂ ಪತ್ತೆಯಾಗಿಲ್ಲ.
ತನಿಖೆ ನಡೆಸಲಾಗುತ್ತಿದ್ದು, ಇದುವರೆಗೆ ಯಾರನ್ನೂ ಸಂಶಯಿಸಲಾಗಿಲ್ಲ ಎಂದು ಅಸ್ಸಾಂ ಸರ್ಕಾರದ ವಕ್ತಾರರಾಗಿರುವ ಆರೋಗ್ಯ ಸಚಿವ ಹಿಮಂತ ಹಿಸ್ವಾ ಸರ್ಮಾ ಹೇಳಿದ್ದಾರೆ. ಈ ಘಟನೆಯು ಅಸ್ಸಾಮಿನ ಮಾಧ್ಯಮ ವಲಯಕ್ಕೆ ಆಘಾತ ಉಂಟು ಮಾಡಿದೆ.
ಮುಜುಂದಾರ್ ಅವರು ತನ್ನ ನಿರ್ಭಿಡೆಯ ಬರಹದಿಂದ ಖ್ಯಾತರಾಗಿದ್ದರು ಎಂಬುದಾಗಿ ಹಿರಿಯ ಪತ್ರಕರ್ತ ಅತನು ಭುಯಾನ್ ಹೇಳಿದ್ದಾರೆ. |