ಭಾರತೀಯ ಜನತಾ ಪಕ್ಷದ ಯುವ ನೇತಾರ, ಈಗಾಗಲೇ 'ದ್ವೇಷ ಭಾಷಣ'ಕ್ಕಾಗಿ ದೇಶಾದ್ಯಂತ ಸುದ್ದಿಯಲ್ಲಿರುವ ವರುಣ್ ಗಾಂಧಿ ವಿರುದ್ಧ ಇದೀಗ 'ಸಿಖ್ಖರ ವಿರುದ್ಧ ಹೇಳಿಕೆ' ನೀಡಿದ್ದಾರೆ ಎಂದು ಆರೋಪಿಸಿರುವುದರೊಂದಿಗೆ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
ಪಂಜಾಬಿನಲ್ಲಿ ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯ ಮಿತ್ರಪಕ್ಷವೂ ಆಗಿರುವ ರಾಜ್ಯದ ಆಡಳಿತಾರೂಢ ಅಕಾಲಿ ದಳ ಈ ಬಗ್ಗೆ ಮೌನ ವಹಿಸಿದೆಯೇಕೆ ಎಂದು ವಿರೋಧ ಪಕ್ಷಗಳು ಕೆಂಡ ಕಾರತೊಡಗಿವೆ.
ವರುಣ್ ಗಾಂಧಿ ತಮ್ಮ ಕ್ಷೇತ್ರ, ಉತ್ತರ ಪ್ರದೇಶದ ಫಿಲಿಬಿಟ್ನಲ್ಲಿ ಮಾಡಿರುವ ಭಾಷಣದಲ್ಲಿ 'ಸಿಖ್ ವಿರೋಧಿ' ಹೇಳಿಕೆಗಳಿರುವ ಸಿಡಿಯನ್ನು ತಂದು ಎಲ್ಲರಿಗೂ ವಿತರಿಸುವುದಾಗಿ ತಿಳಿಸಿರುವ ಕಾಂಗ್ರೆಸ್, ಇದು ಬಿಜೆಪಿ ಮತ್ತು ಅಕಾಲಿ ದಳದ ನಿಜ ಬಣ್ಣ ಬಯಲು ಮಾಡಲಿದೆ ಎಂದಿದೆ.
'ಅಕಾಲಿಗಳು ಈ ಬಗ್ಗೆ ಕ್ರಿಮಿನಲ್ ಮೌನ ವಹಿಸಿದ್ದಾರೆ. ಯಾಕೆಂದರೆ, ಬಿಜೆಪಿಯನ್ನು ಎದುರು ಹಾಕಿಕೊಂಡು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ಅವರಿಗೆ ಇಚ್ಛೆಯಿಲ್ಲ' ಎಂದು ಲೂಧಿಯಾನ ಅಭ್ಯರ್ಥಿ, ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದಾರೆ.
ಸಿಖ್ಖರು ಮತ್ತು ಮುಸ್ಲಿಮರ ವಿರುದ್ಧ ವರುಣ್ ಗಾಂಧಿ ನೀಡಿದ್ದ ಹೇಳಿಕೆಯನ್ನು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಒಪ್ಪುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಅಮರಿಂದರ್ ಸಿಂಗ್ ಆಗ್ರಹಿಸಿದ್ದಾರೆ.
ಸಿಖ್ ಸಮುದಾಯದ ಪರಮೋಚ್ಚ ಧಾರ್ಮಿಕ ಕೇಂದ್ರವಾಗಿರುವ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್ಜಿಪಿಸಿ) ಈ ಬಗ್ಗೆ ಗುರುವಾರ ಸಭೆಯೊಂದನ್ನು ಕರೆದಿದ್ದು, ವರುಣ್ ಗಾಂಧಿ ಹೇಳಿಕೆಗಳ ಕುರಿತು ಚರ್ಚಿಸಲಿದೆ. ಎಸ್ಜಿಪಿಸಿಯಲ್ಲಿ ಅಕಾಲಿ ದಳದ ಸದಸ್ಯರೇ ಹೆಚ್ಚಿರುವುದು ಇಲ್ಲಿ ಉಲ್ಲೇಖಾರ್ಹ. |