ಇರಾಕಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದವೇಳೆ ಕೋಪೋದ್ರಿಕ್ತ ಇರಾಕಿ ಪತ್ರಕರ್ತ ಬೂಟ್ ಎಸೆದಂತಹ ಘಟನೆ ಭಾರತದಲ್ಲಿಯೂ ಸಂಭವಿಸಿದೆ. ಕಾಂಗ್ರೆಸ್ ಮುಖ್ಯಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಗೃಹಸಚಿವ ಪಿ.ಚಿದಂಬರಂ ಅವರ ಮೇಲೆ ಪತ್ರಕರ್ತನೊಬ್ಬ ಶೂ ಎಸೆಯುವಂತಹ ಹೇಯ ಕೃತ್ಯಕ್ಕೆ ಮುಂದಾಗಿರುವ ಘಟನೆ ಸೋಮವಾರ ನಡೆದಿದೆ.ಚಿದಂಬರಂ ಅವರು, ಭಾರತದಲ್ಲಿ ಉಗ್ರವಾದ ತಡೆಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ನೀಲಿನಕಾಶೆಯ ಬಿಡುಗಡೆಯ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಶೂ ಎಸೆದಾತನನ್ನು ದೈನಿಕ್ ಜಾಗರಣ್ ಎಂಬ ಹಿಂದಿ ಪತ್ರಿಕೆಯ ಪ್ರತಿನಿಧಿ ಜರ್ನೈಲ್ ಸಿಂಗ್ ಎಂದು ಗುರುತಿಸಲಾಗಿದೆ.ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವ ಪ್ರಕರಣಕ್ಕೆ ಸಂಬಧಿಸಿದಂತೆ ಕೇಳಲಾದ ಪ್ರಶ್ನೆಗೆ ಹೆಚ್ಚಿನ ಮಾಹಿತಿ ನೀಡಲು ಸಚಿವರು ನಿರಾಕರಿಸಿದಾಗ, ಆಕ್ರೋಶಗೊಂಡ ಜರ್ನೈಲ್ ಸಿಂಗ್ ಶೂ ಎಸೆದಿದ್ದಾನೆ. ತನ್ನ ಪ್ರಶ್ನೆಯನ್ನು ಕಡೆಗಣಿಸಿ, ನಂತರದ ಪ್ರಶ್ನೆಗೆ ಕತ್ತು ಚಾಚಿದ ಸಚಿವರ ವರ್ತನೆಯಿಂದ ಸಿಟ್ಟಿಗೆದ್ದ ಜರ್ನೈಲ್ ಸಿಂಗ್ ಕಳಚಿ ಸಿದ್ಧವಾಗಿಟ್ಟಿದ್ದ ಎಂಬುದಾಗಿ ಸಹಪತ್ರಕರ್ತರು ಹೇಳಿದ್ದಾರೆ. ಇದ್ದಕ್ಕಿದ್ದಂತೆ ತನ್ನ ಎಡಭಾಗದಿಂದ ಶೂ ತೂರಿಬಂದಾಗ ಒಂದು ಕ್ಷಣ ಬೆಕ್ಕಸಬೆರಗಾದ ಸಚಿವ ಚಿದಂಬರಂ ನಂತರ ತಕ್ಷಣ ಚೇತರಿಸಿಕೊಂಡು, 'ಪರ್ವಾಗಿಲ್ಲ, ಇರ್ಲಿ ಬಿಡಿ' ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ತಾನಾತನನ್ನು ಕ್ಷಮಿಸಿದ್ದೇನೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಅಲ್ಲದೆ, ತಕ್ಷಣವೇ ಶಾಂತರಾಗುವಂತೆ ಪತ್ರಕರ್ತರನ್ನು ಕೋರಿದರು. ಅವರು 'ಡಸಂಟ್ ಮ್ಯಾಟರ್' ಎಂಬುದಾಗಿ ಮತ್ತೆಮತ್ತೆ ಪುನರುಚ್ಚರಿಸಿದರು.ಜರ್ನೈಲ್ ಸಿಂಗ್ನನ್ನು ತಕ್ಷಣವೇ ಸುತ್ತವರಿದ ಭದ್ರತಾ ಪಡೆಗಳು ಸಂಸದ್ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.ಸರ್ಕಾರದಿಂದ ಸಿಖ್ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ತಾನು ಬೂಟು ಎಸೆದಿರುವುದಾಗಿ ಆತ ಬಳಿಕ ಹೇಳಿದ್ದಾನೆ.ಇದೇವೇಳೆ, ಕಾಕತಾಳೀಯ ಎಂಬಂತೆ, ಟೈಟ್ಲರ್ಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರತಿನಭಟಿಸಿ ಸಿಖ್ ಸಮುದಾಯದ ಮಂದಿ ಜಂತರ್ ಮಂತರ್ನಿಂದ ಸೋನಿಯಾ ನಿವಾಸಕ್ಕೆ ಮೆರವಣಿಗೆ ತೆರಳಿದ್ದಾರೆ. |