ಜಿ-20 ಸಮ್ಮೇಳನದಲ್ಲಿ ಭಾಗವಹಿಸಿದ್ದ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಪ್ಪುಹಣ ಹಾಗೂ ರಹಸ್ಯಖಾತೆಗಳ ಮೌನ ವಹಿಸಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೂರಿದ್ದಾರೆ.
"ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಜಿ-20 ಶೃಂಗ ಸಮ್ಮೇಳನದಲ್ಲಿ ಆರ್ಥಿಕ ನಿಯಂತ್ರಣಗಳನ್ನು ಹೇರುವ ಮತ್ತು ಕಪ್ಪು ಹಣ ಹಾಗೂ ರಹಸ್ಯ ಖಾತೆಗಳನ್ನು ಬಹಿರಂಗ ಪಡಿಸಲು ವಿಫಲವಾಗಿರುವ ರಾಷ್ಟ್ರಗಳ ಮೇಲೆ ಒತ್ತಡ ಹೇರುವ ಮಸೂದೆಯನ್ನು ಪಾಸು ಮಾಡಿವೆ. ಆದರೆ ಮಾನ್ಯ ಮನಮೋಹನ್ ಸಿಂಗ್ ಅವರು ಈ ಕುರಿತು ಮೌನ ವಹಿಸಿದ್ದರು" ಎಂಬುದಾಗಿ ಮೋದಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ನುಡಿದರು.
ಈ ವಿಚಾರಕ್ಕೆ ಬೆಂಬಲ ನೀಡದ ಪ್ರಧಾನಿ ಸಿಂಗ್ ಅವರು ಯಾರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಮೋದಿ ಪ್ರಶ್ನಿಸಿದರು.
ಸ್ವಿಸ್ ಬ್ಯಾಂಕ್ ಸೇರಿದಂತೆ ಹೊರದೇಶಗಳ ಹಣಕಾಸು ಸಂಸ್ಥೆಗಳಲ್ಲಿ ಭಾರತದ ಸುಮಾರು 70 ಲಕ್ಷ ಕೋಟಿ ರೂಪಾಯಿ ಕೊಳೆಯುತ್ತಿದೆ ಎಂದು ನುಡಿದ ಮೋದಿ, ಆಡ್ವಾಣಿ ಅವರು ಪ್ರಧಾನಿಯಾದರೆ ಇಂತಹ ಕಳ್ಳ ಹಣವನ್ನು ರಾಷ್ಟ್ರಕ್ಕೆ ಮರಳಿ ತಂದು ಅದನ್ನು ಬಡಜನತೆಯ ಅಭಿವೃದ್ಧಿಗೆ ಬಳಸಲಿದ್ದಾರೆ ಎಂದು ನುಡಿದರು. |