"ನಾನು ಗೃಹಸಚಿವನಾಗಿರುತ್ತಿದ್ದರೆ, ವರುಣ್ ಗಾಂಧಿಯ ಎದೆ ಮೇಲೆ ರೋಲರ್ ಹರಿಸಿ ಆತನನ್ನು ಪುಡಿಮಾಡುತ್ತಿದ್ದೆ" ಎಂಬ ಹೇಳಿಕೆ ನೀಡಿರುವ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ.
"ಲಾಲೂ ಅವರನ್ನು ಯಾವುದೇ ಸಂದರ್ಭದಲ್ಲಿಯೂ ಬಂಧಿಸಬಹುದಾಗಿದೆ. ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ" ಎಂಬುದಾಗಿ ಕೃಷ್ಣಗಂಜ್ ಎಸ್ಪಿ ಹೇಳಿದ್ದಾರೆ. ಜಿಲ್ಲಾ ದಂಡಾಧಿಕಾರಿ ಅವರು ಎಫ್ಐಆರ್ ದಾಖಲಿಸುವಂತೆ ಸೂಚಿಸಿದ್ದರು.
"ಲಾಲು ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153(ಉದ್ದೇಶ ಪೂರ್ವಕವಾಗಿ ಗಲಭೆ ಎಬ್ಬಿಸಲು ಉತ್ತೇಜನ ನೀಡುವಿಕೆ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 125ರನ್ವಯ ಪ್ರಕರಣ ದಾಖಲಿಸಲಾಗಿದೆ ಎಂಬುದಾಗಿ ಜಿಲ್ಲಾ ದಂಡಾಧಿಕಾರಿ ಎಫ್. ಅಹ್ಮದ್ ಹೇಳಿದ್ದಾರೆ.
"ನಾನು ಲಾಲೂ ಅವರು ಭಾಷಣ ವೀಕ್ಷಿಸಿದ್ದೇನೆ. ಅವರು ಕೋಮುಸಂಘರ್ಷ ಹುಟ್ಟಿಸುವಂತಹ ಮತ್ತು ಸಮಾಜ ವಿಭಜಕ ಹೇಳಿಕೆ ನೀಡಿದ್ದಾರೆ" ಎಂದು ಅಹ್ಮದ್ ತಿಳಿಸಿದ್ದಾರೆ. ಅಲ್ಲದೆ, ವಿವಾದಾಸ್ಪದ ಸಿಡಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿರುವುದಾಗಿಯೂ ಅವರು ನುಡಿದರು. |