ಭಯೋತ್ಪಾದನೆಯ ವಿರುದ್ಧ ಹೋರಾಡಲು ಸಾಮರ್ಥ್ಯವಿರುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್ ಎಂದಿರುವ ಗೃಹಸಚಿವ ಪಿ. ಚಿದಂಬರಂ, ಪಕ್ಷವು ಜನತೆಗೆ ಭದ್ರತೆ ಒದಗಿಸುವ ಖಾತರಿಯ ಭರವಸೆ ನೀಡಿದೆ ಎಂದು ಹೇಳಿದ್ದಾರೆ. ಅವರು ಭಯೋತ್ಪಾನೆಯ ನಿಭಾವಣೆ ಹಾಗೂ ಭದ್ರತಾ ವಿಚಾರಗಳ ಕುರಿತು ಕಾಂಗ್ರೆಸ್ನ ನೀಲಿನಕಾಶೆ ಬಿಡುಗಡೆ ಮಾಡಿದ ಬಳಿಕ ಮಾತನಾಡುತ್ತಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ವಿಸ್ತೃತ ಯೋಜನೆಗಳ ಮೂಲಕ ಭದ್ರತೆಯ ಭರವಸೆ ಒದಗಿಸಲಿದೆ ಎಂದು ಅವರು ತಿಳಿಸಿದರು." ವಿವಿಧತೆಯಲ್ಲಿನ ಏಕತೆಗೆ ಭಾರತದ ಬದ್ಧತೆಯು ಅದನ್ನು ಭಯೋತ್ಪಾದನೆಯ ಗುರಿಯನ್ನಾಗಿಸಿದೆ. ಘೋಷಿತ ಭಯೋತ್ಪಾದನಾ ಸಂಘಟನೆಗಳಿವೆ, ರಾಷ್ಟ್ರೀಯರು, ರಾಷ್ಟ್ರರಹಿತರು ಮುಂತಾದವರಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮಾತ್ರ ರಾಷ್ಟ್ರದ ಸೂಕ್ಷ್ಮತೆ ಮತ್ತು ಭದ್ರತೆಯನ್ನು ಸರಿದೂಗಿಸಿಕೊಂಡು ಹೋಗಲು ಸಾಧ್ಯ" ಎಂದು ಚಿದಂಬರಂ ನುಡಿದರು." ನಮ್ಮನ್ನು ಮರಳಿ ಅಧಿಕಾರಕ್ಕೆ ತಂದರೆ, ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮರ ಕೊಠಡಿಯನ್ನು ಸ್ಥಾಪಿಸಲಾಗುವುದು" ಎಂದು ಅವರು ತಿಳಿಸಿದರು. ಅಸ್ಸಾಮಿನಲ್ಲಿ ಸಂಭವಿಸಿರುವ ಒಂಬತ್ತು ಮಂದಿಯನ್ನು ಆಹುತಿ ಪಡೆದ ಮಾರಣಾಂತಿಕ ದಾಳಿಯ ಮರುದಿನ ಈ ನೀಲಿನಕಾಶೆಯ ಬಿಡುಗಡೆಗೆ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದು ಕಾಕಾತಾಳೀಯ ಅಷ್ಟೆ ಎಂದರು. ಅಲ್ಲದೆ ಅಸ್ಸಾಂ ಪೊಲೀಸರು ಹಿಂಸಾಚಾರದ ವಿರುದ್ಧ ಹೋರಾಡುತ್ತಿದ್ದು ಅವರ ಕಠಿಣ ಪರಿಶ್ರಮವನ್ನು ತಾನು ಶ್ಲಾಘಿಸುವುದಾಗಿ ಅವರು ನುಡಿದರು. 9 /11ರ ದಾಳಿಯ ಬಳಿಕ ಅಮೆರಿಕದಲ್ಲಿ ಎಲ್ಲ ದಾಳಿಗಳನ್ನು ತೊಡೆದು ಹಾಕಲು ಹೇಗೆ ಸಾಧ್ಯವಾಯಿತು ಎಂದು ಕೇಳಲಾದ ಪ್ರಶ್ನೆಗೆ, ಅಮೆರಿಕ ಮತ್ತು ಭಾರತದ ಪರಿಸ್ಥಿತಿಗಳು ಭಿನ್ನವಾಗಿದೆ, ನಾವು ಬೆಂಕಿಯ ವರ್ತುಲದ ನಡುವಿದ್ದೇವೆ. ಅಮೆರಿಕದ ಸುತ್ತ ಮೆಕ್ಸಿಕೋ ಮತ್ತು ಕೆನಡಾ ಮಾತ್ರವಿದೆ ಎಂದು ಉತ್ತರಿಸಿದರು. |