ಸಚಿವರ ವಿರುದ್ಧದ ಬೂಟು ತೂರಾಟ ಘಟನೆಯ ಬಳಿಕ, ಕಾಂಗ್ರೆಸ್ ಇದೀಗ ತನ್ನ ಪಕ್ಷದ ಪ್ರತಿನಿಧಿಗಳಾದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಅವರ ಅಭ್ಯರ್ಥಿತನವನ್ನು ಮರುಪರಿಶೀಲನೆ ಮಾಡುವುದಾಗಿ ಹೇಳಿದೆ. ಇವರಿಬ್ಬರು ಸಿಖ್ ನರಮೇಧ ಆರೋಪವನ್ನು ಎದುರಿಸುತ್ತಿದ್ದರು.
ಒಂದು ಬೃಹತ್ ಪಕ್ಷವಾಗಿರುವ ಕಾಂಗ್ರೆಸ್, ಸೂಕ್ತಕಾಲದಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುತ್ತದೆ, ಏನಾಗುತ್ತದೆ ಎಂದು ಕಾದುನೋಡೋಣ ಎಂದು ಕಾಂಗ್ರೆಸ್ ವಕ್ತಾರ ಅಶ್ವನಿ ಕುಮಾರ್ ಅವರು, ಪತ್ರಕರ್ತನೊಬ್ಬ ಶೂ ಎಸೆದ ಘಟನೆಯ ಗಂಟೆಗಳ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಕ್ಷವು ಈ ಇಬ್ಬರ ಅಭ್ಯರ್ಥಿತನವನ್ನು ಹಿಂತೆಗೆಯಲಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷವಾಗಿರುವ ಬಿಜೆಪಿಯೂ ಸಹ ಈ ಇಬ್ಬರ ಅಭ್ಯರ್ಥಿತನವನ್ನು ಹಿಂತೆಗೆಯಲು ಒತ್ತಾಯಿಸಿತ್ತು. |