ಎನ್ಡಿಎ ಸರ್ಕಾರದಲ್ಲಿ ಗೃಹಖಾತೆಯನ್ನು ಹೊಂದಿದ್ದ ಎಲ್.ಕೆ. ಆಡ್ವಾಣಿ ಅವರು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಸೋನಿಯಾ ಗಾಂಧಿ ಹೇಳುವ ಮೂಲಕ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಡ್ವಾಣಿ ಪದೇಪದೇ ದುರ್ಬಲ ಪ್ರಧಾನಿ ಎಂದಿರುವುದಕ್ಕೆ ತಿರುಗೇಟು ನೀಡಿದ್ದಾರೆ.
1999ರಲ್ಲಿ ಉಗ್ರವಾದಿಗಳು ಕಾಂಧಹಾರ್ನಲ್ಲಿ ವಿಮಾನ ಅಪಹರಣ ನಡೆಸಿದ್ದ ವೇಳೆ ಆಡ್ವಾಣಿ ಅವರು ಪರಿಸ್ಥಿತಿಯನ್ನು ನಿಭಾಯಿಸಿದ್ದ ಪರಿಯನ್ನು ಸೋನಿಯಾ ಆಂಧ್ರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ವೇಳೆಗೆ ಟೀಕಿಸಿದರು.
ಕಾಂಗ್ರೆಸ್ ಭಯೋತ್ಪಾದನೆಯ ವಿರುದ್ಧ ಮೆದು ಧೋರಣೆ ತಾಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರುಗಳನ್ನು ಆಹುತಿ ಪಡೆದ ಉಗ್ರವಾದದ ವಿರುದ್ಧ ಮೆದು ಧೋರಣೆ ತಾಳಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಗೃಹಖಾತೆಯನ್ನೂ ಹೊಂದಿದ್ದ ಆಡ್ವಾಣಿ ಉಪಪ್ರಧಾನಿ ಆಗಿದ್ದಾಗ ಅವರು ಅತ್ಯುಗ್ರ ಭಯೋತ್ಪಾದಕರನ್ನು ಅತಿಥಿಗಳಂತೆ ಕರೆದೊಯ್ದು ಬಿಟ್ಟು ಬಂದಿದ್ದರು. ಅದೇ ಉಗ್ರರು ಸಂಸತ್ತಿನ ಮೇಲೆ ಹಾಗೂ ರಾಷ್ಟ್ರದ ವಿವಿಧೆಡೆ ದಾಳಿಗಳನ್ನು ನಡೆಸಿದರು. ಇಂತಹ ವ್ಯಕ್ತಿ ಇಂದು ನಾವು ಭಯೋತ್ಪಾದಕರ ವಿರುದ್ಧ ಮೃದು ಧೋರಣೆ ತಳೆದಿರುವುದಾಗಿ ದೂರತ್ತಿದ್ದಾರೆ ಎಂದು ಅವರು ವಿಜಯನಗರಂನಲ್ಲಿ ನಡೆದ ಸಮಾವೇಶದಲ್ಲಿ ನುಡಿದರು.
"ಇಂತಹ ವ್ಯಕ್ತಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಎಲ್ಲವ್ಯಕ್ತಿಗಳಿಗೂ ಕನಸು ಕಾಣುವ ಹಕ್ಕಿದೆ. ಆದರೆ ನಮ್ಮ ಕನಸು ಭಿನ್ನವಾಗಿದೆ. ಧರ್ಮ ಜಾತಿಗಳ ಹಂಗಿಲ್ಲದೆ, ರಾಷ್ಟ್ರದ ಪ್ರತಿಯೋರ್ವ ಪ್ರಜೆಯ ಅಭಿವೃದ್ಧಿಯು ನಮ್ಮ ಕನಸು" ಎಂದು ನುಡಿದ ಸೋನಿಯಾ, ಮನಮೋಹನ್ ಸಿಂಗ್ ಅವರು ಒಬ್ಬ ಸುದೃಢ ನಾಯಕ ಹಾಗೂ ಪ್ರಾಮಾಣಿಕ ಪ್ರಾಮಾಣಿಕ ವ್ಯಕ್ತಿ ಎಂದು ನುಡಿದರು. |