ತೊಂಬತ್ತರ ದಶಕದ ಆದಿಯಲ್ಲಿ ಜಾರಿಗೆ ತಂದಿರುವ ತೆರಿಗೆ ಸುಧಾರಣಾ ನೀತಿಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜಾ ಚೆಲ್ಲಯ್ಯ ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದಾಗಿ ಸಾವಿಗೀಡಾಗಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರು ಚೆಲ್ಲಯ್ಯ ಅವರ ಪುತ್ರಿ ಮಲ್ಲಿಕಾರಿಗೆ ದೂರವಾಣಿ ಕರೆ ನೀಡಿದ್ದು ಸಂತಾಪ ಸೂಚಿಸಿದ್ದಾರೆ. 87ರ ಹರೆಯದವರಾಗಿದ್ದ ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಸೈಂಟ್ ಥೋಮಸ್ ಚಿತಾಗಾರದಲ್ಲಿ ಬುಧವಾರ ನಡೆಯಲಿದೆ.
ತೆರಿಗೆ ಸುಧಾರಣಾ ಸಮಿತಿಗೆ 1991-1995ರ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಚೆಲ್ಲಯ್ಯ ಅವರು ಉದಾರವಾದದ ಬಳಿಕದ ರಾಷ್ಟ್ರದ ವಿತ್ತೀಯ ನೀತಿಗಳಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಚೆಲ್ಲಯ್ಯ ಅವರು 'ಆಸ್ಪೆಕ್ಟ್ಸ್ ಆಫ್ ದ ಬ್ಲಾಕ್ ಇಕಾನಮಿ ಇನ್ ಇಂಡಿಯಾ' ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಮರಣಕಾಲಕ್ಕೂ ತೆರಿಗೆ ಸುಧಾರಣೆ ಕುರಿತು ಪುಸ್ತಕ ಒಂದನ್ನು ಬರೆಯುತ್ತಿದ್ದರು ಎಂಬುದಾಗಿ ಅವರ ಕುಟುಂಬದ ಮೂಲಗಳು ಹೇಳಿವೆ. |