ಮಾರ್ಚ್ 16ರಂದು ಸುಮಾರು 28ರಿಂದ 35ರಷ್ಟು ತಾಲಿಬಾನ್ ಹೋರಾಟಗಾರರು ಕಾಶ್ಮೀರ ಕಣಿವೆ ಮೂಲಕ ರಾಷ್ಟ್ರಕ್ಕೆ ನುಸುಳಿರಬಹುದು ಎಂಬುದಾಗಿ ಗುಪ್ತಚರ ಮಾಹಿತಿಗಳು ಹೇಳಿವೆ. ಜಮ್ಮು ಕಾಶ್ಮೀರದ ಗುರೇಜ್ ವಲಯದಲ್ಲಿ ಈ ನುಸುಳುವಿಕೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾದಾಟ ನಡೆಸಿದ್ದು ಈ ವೇಳೆ ಉಗ್ರನೋರ್ವ ಮೃತನಾಗಿದ್ದರೆ, ಇತರರು ಪರಾರಿಯಾಗಿದ್ದಾರೆ.
ಇವರಲ್ಲಿ ಲಷ್ಕರೆ ಉಗ್ರರು ಸೇರಿದ್ದಾರೆ. ಇದೇವೇಳೆ ಹಿಜ್ಬುಲ್ ಮುಜಾಹಿದ್ದೀನ್ ಸಹ ತಾಲಿಬಾನ್ ಭಾರತದೊಳಕ್ಕೆ ನುಸುಳಲು ಸಹಾಯ ಮಾಡುತ್ತಿದೆ ಎಂದು ವರದಿಗಳು ಹೇಳಿವೆ.
ಈ ವೇಳೆ ಉಗ್ರರು ರಾಷ್ಟ್ರದೊಳಗೆ ನುಸುಳಲು ಬಳಸಿರುವ ಮಾರ್ಗ ಸಂಪೂರ್ಣ ಭಿನ್ನವಾಗಿದ್ದು, ಶಸ್ತ್ರಸಜ್ಜಿತ ಉಗ್ರರು ತಮ್ಮನ್ನು ಅಡ್ಡಿಪಡಿಸಿದ ಭದ್ರತಾ ಪಡೆಗಳನ್ನೇ ಹೊಡೆದುರುಳಿಸುವ ಯೋಜನೆ ಹಾಕಿಕೊಂಡಿವೆ ಎಂಬುದಾಗಿ ಮೂಲಗಳು ಹೇಳುತ್ತಿವೆ.
ಹಿಮಚ್ಚಾದಿತ ಬೆಟ್ಟ ಪ್ರದೇಶಗಳಲ್ಲಿ ಹಿಮ ಕರಗುವ ಮುಂಚಿತವಾಗಿ ರಾಷ್ಟ್ರದೊಳಕ್ಕೆ ನುಸುಳಿರುವ ಇವರು ಗಡಿಯುದ್ದಕ್ಕೂ ಗುಂಡಿನ ಚಕಮಕಿ ನಡೆಸುತ್ತಲೇ ಬಂದಿದ್ದಾರೆ.
ಆದರೆ ಈ ಉಗ್ರರು ಜಿಹಾದಿಗಳು ಆದರೆ ಇವರು ತಾಲಿಬಾನಿಗಳಲ್ಲ ಎಂದು ಮೂಲ ಒಂದು ಹೇಳಿದೆ. "ಅಕ್ರಮವಾಗಿ ನುಸುಳುವವರು ಲಷ್ಕರ್-ಇ-ತೋಯ್ಬಾ, ಜೈಶ್-ಇ-ಮೊಹಮ್ಮದ್ ಮತ್ತು ಅಲ್-ಬದ್ರ್ ಸಂಘಟನೆಯವರು. ಇವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಪಂಜಾಬಿನವರು. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಇದಕ್ಕೆ ಸೇರಿರುವ ವಾಯುವ್ಯ ಪ್ರಾಂತ್ಯದವರಾಗಿದ್ದಾರೆ. ಇವರು ತಾಲಿಬಾನ್ ಪಡೆಗಳಲ್ಲ ಎಂದು ಅವರು ಹೇಳಿದ್ದಾರೆ.
ಆದರೆ ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರರು ಮತ್ತು ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಯಲ್ಲಿ ತಾಲಿಬಾನಿಗಳ ಚಳುವಳಿಗೂ ಉತ್ತಮ ಸಂಪರ್ಕಗಳಿವೆ. ಇವರ ನಡುವೆ ತರಬೇತಿ ನೆಲೆಗಳನ್ನು ಹಂಚಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. |