ಮಾಧ್ಯಮಗಳು ಕಾಂಗ್ರೆಸ್ ಪರವಾಗಿವೆ ಎಂದು ಆರೋಪಿಸಿರುವ ಗೋವಾ ಬಿಜೆಪಿ ನಾಯಕರು, ಚುನಾವಣಾ ಸಂದರ್ಭದಲ್ಲಿ ಯುಪಿಎಯು ಜಾಹಿರಾತಿಗಾಗಿ ಎಷ್ಚು ಹಣ ನೀಡಿದೆ ಎಂಬುದನ್ನು ತಿಳಿಯಲು ಪ್ರಮುಖ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಬೇಕು ಎಂಬುದಾಗಿ ಹೇಳಿದ್ದಾರೆ.
ಬಿಜೆಪಿಯ ಸ್ನೇಹಿ ಸಂಘಟನೆಯು ಆಯೋಜಿಸಿರುವ ಸಭೆಯಲ್ಲಿ ಮಂಗಳವಾರ ರಾತ್ರಿ ಮಾತನಾಡುತ್ತಿದ್ದ ಗೋವಾ ವಿಪಕ್ಷ ನಾಯಕ ಮನೋಹರ್ ಪರಿಕಾರ್ ಹಾಗೂ ಪಕ್ಷದ ರಾಷ್ಟ್ರೀಯ ವಕ್ತಾರ ರವಿ ಶಂಕರ್ ಪ್ರಸಾದ್ ಅವರು ಮಾಧ್ಯಮಗಳು ತಮ್ಮನ್ನು ಕಾಂಗ್ರೆಸ್ಗೆ ಮಾರಿಕೊಂಡಿವೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪ್ರೇರಿತ ಚುವಾವಣಾ ಪ್ರಚಾರ ಜಾಹೀರಾತುಗಳ ಬಳಿಕ ಲಾಭ ಗಳಿಸಿವೆ ಎಂದು ಹೇಳಲಾಗಿರುವ ಎಲ್ಲಾಪ್ರಮುಖ ಮಾಧ್ಯಮ ಸಂಸ್ಥೆಗಳ ಲೆಕ್ಕಪತ್ರಗಳ ತನಿಖೆಯಾಗಬೇಕು. ಸಂಕಷ್ಟದಲ್ಲಿದ್ದ ಹಲವಾರು ಮಾಧ್ಯಮಗಳು ಇದೀಗ ಲಾಭ ತೋರಿಸಲು ಆರಂಭಿಸಿವೆ" ಎಂಬುದಾಗಿ ಮನೋಹರ್ ಹೇಳಿದ್ದಾರೆ.
ಗೋವಾದಲ್ಲಿನ ಪತ್ರಿಕೆಗಳು ತಮ್ಮ ಖರ್ಚುವೆಚ್ಚಗಳನ್ನು ಸರಿದೂಗಿಸಲು ಪರದಾಡುವ ಸ್ಥಿತಿಯಲ್ಲಿದ್ದರೂ ಉತ್ಪಾದನಾ ವೆಚ್ಚಕ್ಕಿಂತ ಕಾಲಂಶ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಈ ಪತ್ರಿಕೆಗಳು ಜಾಹೀರಾತು ಆದಾಯದಿಂದಲೇ ಬದುಕುತ್ತಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿರುವ ಅವರು, ಮಾಧ್ಯಮಗಳಲ್ಲಿ ಪ್ರತಿಯೊಂದು ದುಡ್ಡಿನಿಂದಲೇ ನಡೆಯುತ್ತದೆ ಎಂದು ಆಪಾದಿಸಿದ್ದಾರೆ.
ಇದೇ ವೇಳೆ ಆಂಗ್ಲ ವಾಹಿನಿಗಳ ಮೇಲೆ ಹರಿಹಾಯ್ದ ರವಿಶಂಕರ್ ಅವರು, ಇಂಗ್ಲೀಷ್ ವಾಹಿನಿಗಳು ಕೇವಲ ಕಾಂಗ್ರೆಸ್ ಪರವಾದ ಸುದ್ದಿಗಳನ್ನೇ ಬಿತ್ತರಿಸುತ್ತವೆ. ಗುಜರಾತ್ ಗಲಭೆಗಳ ಕುರಿತು ವರದಿ ಪ್ರಸಾರ ಮಾಡುತ್ತಲೇ ಇರುವ ಆಂಗ್ಲ ಮಾಧ್ಯಮಗಳು ಸಿಬಿಐ ಜಗದೀಶ್ ಟೈಟ್ಲರ್ಗೆ ಕ್ಲೀನ್ ಚಿಟ್ ನೀಡಿರುವುನ್ನು ಯಾಕೆ ಎತ್ತಿತೋರುತ್ತಿಲ್ಲ ಎಂದು ಪ್ರಶ್ನಿಸಿದರು. |