ಉತ್ತರ ಪ್ರದೇಶ ಸರ್ಕಾರವು ವರುಣ್ ಗಾಂಧಿಯವರನ್ನು ಒಬ್ಬ ಉಗ್ರನಂತೆ ನಡೆಸಿಕೊಳ್ಳುತ್ತಿದೆ ಎಂದು ದೂರಿರುವ ಬಿಜೆಪಿಯು ಬಿಎಸ್ಪಿಯೊಂದಿಗಿನ ಯಾವುದೇ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿದೆ. ಅಲ್ಲದೆ ಎನ್ಡಿಎ ಅಧಿಕಾರಕ್ಕೆ ಬಂದರೆ ಮಾಯಾ ಸರ್ಕಾರದ ಕುಣಿಕೆಯನ್ನು ಬಿಗಿಗೊಳಿಸುವುದಾಗಿ ಹೇಳಿದೆ.
"ಮಾಯಾವತಿ ಸರ್ಕಾರವು ವರುಣ್ರ ವಿರುದ್ಧ ವಿವಿಧ ಪ್ರಕರಣಗಳನ್ನು ಹೇರುವ ಮೂಲಕ ಉಗ್ರನಂತೆ ನಡೆಸಿಕೊಳ್ಳುತ್ತಿದೆ. ಆತನ ವಿವಾದಿದ ಭಾಷಣದ ಕುರಿತು ಫಾರೆನ್ಸಿಕ್ ವರದಿಯನ್ನು ಪರಿಶೀಲಿಸದೆ ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿದೆ" ಎಂಬುದಾಗಿ ಚುನಾವಣಾ ಭಾಷಣ ಮಾಡುತ್ತಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.
ತಮ್ಮಪಕ್ಷದ ಪಿಲಿಭಿತ್ ಅಭ್ಯರ್ಥಿಗಾಗಿ ಪಕ್ಷವು ರಾಜಕೀಯವಾಗಿ ಮತ್ತು ಕಾನೂನು ರೀತ್ಯಾ ಹೋರಾಟ ನಡೆಸುವುದಾಗಿ ಅವರು ನುಡಿದರು. ಇದೇವೇಳೆ, ಎನ್ಡಿಎ ವಿಸ್ತರಿಸುತ್ತಿದ್ದರೆ, ಯುಪಿಎ ಕುಸಿಯುತ್ತಿದೆ ಎಂದು ಅವರು ತುಲನೆ ಮಾಡಿದರು. |