"ರಾಜ್ಯದಲ್ಲಿ ಯಾವುದಾದರೂ ಭಯೋತ್ಪಾದನಾ ದಾಳಿಗಳು ನಡೆದರೆ, ನಕ್ಸಲ್ ಸಮಸ್ಯೆ ಉದ್ಭವಿಸಿದರೆ, ನಾನು ಅಥವಾ ಯಾವುದಾದರೂ ನಾಯಕರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಚುನಾವಣಾ ಆಯೋಗವೇ ಕಾರಣ" ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹೇಳಿದ್ದಾರೆ.
ರಾಜ್ಯದ ಉನ್ನಾತಾಧಿಕಾಯೊಬ್ಬರನ್ನು ವರ್ಗಾವಣೆ ಮಾಡಿರುವ ಆಯೋಗದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಅವರು, ಇಂತಹ ಕ್ರಮಗಳು ಅಧಿಕಾರಿಗಳ ನೈತಿಕಸ್ಥೈರ್ಯ ಕುಸಿಯುವಂತೆ ಮಾಡುತ್ತದಲ್ಲದೆ ಇದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸುತ್ತದೆ ಎಂದು ಮಾಯಾವತಿ ಹೇಳಿದ್ದಾರೆ.
ಉತ್ತರಪ್ರದೇಶದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಫತೇ ಬಹಾದೂರ್ ಅವರನ್ನು ಚುನಾವಣಾ ಆಯೋಗವು ಮಂಗಳವಾರ ವರ್ಗಾಯಿಸಿರುವ ಕ್ರಮವನ್ನು ಖಂಡಿಸಿರುವ ಅವರು ಇದು ರಾಜಕೀಯ ದುರುದ್ದೇಶದಿಂದ ಕೂಡಿದ ಕ್ರಮವಾಗಿದೆ ಎಂದು ದೂರಿದ್ದಾರೆ. |