ತಮ್ಮ ಪಕ್ಷವು ಅಧಿಕಾರಕ್ಕೇ ಬಂದುದೇ ಆದರೆ 21ನೆ ಶತಮಾನವನ್ನು ಭಾರತದ ಶತಮಾನವನ್ನಾಗಿಸುವುದಾಗಿ ಎನ್ಡಿಎಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಹೇಳಿದ್ದಾರೆ. ನಮ್ಮ ಗುರಿಯು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತವನ್ನು ನಂ ವನ್ ಪಟ್ಟಕ್ಕೇರಿಸುವುದಾಗಿದೆ ಎಂದು ಅವರು ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡುತ್ತಾ ನುಡಿದರು.
ಆಡ್ವಾಣಿ ಅವರು ಗುಜರಾತಿನ ಗಾಂಧಿನಗರದಿಂದ ಚುನಾವಣೆಗೆ ಸ್ಫರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದರು. ಈ ಹಿಂದೆ ನಾಲ್ಕು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಆಡ್ವಾಣಿ ಐದನೆ ಬಾರಿಗೆ ಆಯ್ಕೆ ಬಯಸಿದ್ದಾರೆ.
ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ, ಪತ್ನಿ ಹಾಗೂ ಪುತ್ರಿಯೊಂದಿಗೆ ಆಗಮಿಸಿದ್ದ ಅವರು ಗುಜರಾತ್ ಬಿಜೆಪಿ ಅಧ್ಯಕ್ಷ ಪುರುಶೋತ್ತಮ್ ರುಪಾಲ ಅವರ ನಿವಾಸದಲ್ಲಿ ನಡೆದ ಪೂಜೆಯ ಬಳಿಕ ತಮ್ಮ ನಾಮಪತ್ರ ಸಲ್ಲಿಸಿದರು. ಗುಜರಾತಿನಲ್ಲಿ ಎಪ್ರಿಲ್ 30ರಂದು ಚುನಾವಣೆ ನಡೆಯಲಿದೆ.
ಬಿಜೆಪಿ ಅಧಿಕಾರ ಗಳಿಸಿರುವ ಗುಜರಾತ್, ಚತ್ತೀಸ್ಗಢ, ಹಿಮಾಚಲ ಪ್ರದೇಶ, ಬಿಹಾರ ಮತ್ತು ಇತರೆಡೆಗಳಲ್ಲಿ ಸರ್ಕಾರಗಳು ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂದು ನುಡಿದ ಅವರು ರಾಷ್ಟ್ರದ ಜನತೆಗೆ ಸೇವೆ ಸಲ್ಲಿಸಲು ಕೇಂದ್ರದಲ್ಲಿ ಇಂತಹ ಸರಕಾರದ ಅವಶ್ಯಕತೆ ಇದೆ ಎಂದು ನುಡಿದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ ಪ್ರಧಾನಿ ಅಭ್ಯರ್ಥಿ ಮೋದಿಯವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸಿದರು. ಇಂದು ತಾನು ಉನ್ನತ ಸ್ಥಾನದಲ್ಲಿದ್ದರೆ, ನರೇಂದ್ರ ಭಾಯ್ ಅವರಂತಹವರು ಹಾಕಿರುವ ಭದ್ರಬುನಾದಿಯೇ ಕಾರಣ ಎಂದು ಹೇಳಿದ್ದಾರೆ. |