ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಭುಗಿಲೆದ್ದ 1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ್ ಟೈಟ್ಲರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿರುವುದನ್ನು ವಿರೋಧಿಸಿ ಸಿಖ್ ಸಂಘಟನೆಗಳು ಪಂಜಾಬಿನಾದ್ಯಂತ ಬುಧವಾರ ಪ್ರತಿಭಟನೆ ನಡೆಸುತ್ತಿವೆ. ಇವರು ಪಂಜಾಬಿನ ಹಲವೆಡೆ ರೈಲು ತಡೆ ನಡೆಸಿದ್ದಾರೆ.
ದಮ್ದಮಿ ತಕ್ಸಾಲ್ ಮತ್ತು ಜಾಲ್ ಖಲ್ಸಾ ಸಂಘಟನೆಗಳನ್ನೊಳಗೊಂಡಿರುವ ಕಾರ್ಯಕರ್ತರು ಲೂಧಿಯಾನದ ಗ್ಯಾಸ್ಪುರ ಗ್ರಾಮ, ಜಲಂಧರ್ನ ಬಿಯಾಸ್ ಮತ್ತು ದಾಕೋಯಗಳಲ್ಲಿ ರೈಲು ತಡೆ ನಡೆಸಿದರು.
ಟೈಟ್ಲರ್ ಅವರಿಗೆ ಚುನಾವಣೆಯಲ್ಲಿ ಸ್ಫರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿರುವುದು ಮತ್ತು ಸಿಬಿಐ ಅವರನ್ನು ಸಿಖ್ ವಿರುದ್ಧ ದಂಗೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿರುವುದು ಸಿಖ್ ಸಮುದಾಯವನ್ನು ಕೆರಳಿಸಿ ಆಕ್ರೋಶ ಭರಿತವಾಗಿಸಿದೆ.
ಮಂಗಳವಾರ ಸಚಿವ ಚಿದಂಬರಂ ಅವರು ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ, ಜಗದೀಶ್ ಅವರನ್ನು ಸಿಬಿಐ ದೋಷಮುಕ್ತರನ್ನಾಗಿಸಿದ ಕ್ರಮದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಸೂಕ್ತ ಉತ್ತರ ನೀಡಿಲ್ಲ ಎಂದು ಸಿಟ್ಟಿಗೆದ್ದ ಪತ್ರಕರ್ತ ಜರ್ನೈಲ್ ಸಿಂಗ್ ಸಚಿವರತ್ತ ಬೂಟು ಎಸೆದಿದ್ದ. ಈ ಮಧ್ಯೆ ಟೈಟ್ಲರ್ ಅಭ್ಯರ್ಥಿತನವನ್ನು ಮರುಪರಿಶೀಲಿಸುವುದಾಗಿ ಕಾಂಗ್ರೆಸ್ ಹೇಳಿದೆ.
|