ಜಿಪಿಎಸ್ ಸಿಸ್ಟಂಗಳು, ಸ್ಯಾಟಲೈಟ್ ಫೋನ್ಗಳು, ವಿಸ್ತೃತ ಮ್ಯಾಪುಗಳು, ಚಳಿ ತಡೆಯುವ ಬೆಚ್ಚನೆಯ ಉಡುಪು ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರು ಸಂಪೂರ್ಣ ಸನ್ನದ್ಧರಾಗಿ ಗಡಿಯಲ್ಲಿ ನಿಂತಿದ್ದಾರೆ. ಸಂಪೂರ್ಣ ತರಬೇತು ನೀಡಿ, ಮಾನಸಿಕವಾಗಿ ತಯಾರಿ ನಡೆಸಿ ಬಂದಿರುವ ಈ ಉಗ್ರರಿಗೆ ಭದ್ರತಾ ಪಡೆಗಳೊಂದಿಗೆ ಕಾದಾಡಲು ಸೂಚಿಸಲಾಗಿದೆ. ಇವರು ಒಬ್ಬೊಬ್ಬರಾಗಿ ಬರುತ್ತಿಲ್ಲ. ಅಥವಾ ಸಣ್ಣಸಣ್ಣ ತಂಡಗಳಲ್ಲಿ ಬರುತ್ತಿಲ್ಲ. ಹಿಂಡುಹಿಂಡಾಗಿ ದಾಳಿ ನಡೆಲು ಇವರು ಸರ್ವಸನ್ನದ್ಧರು.
ಈ ಹಿಂದೆ ಉಗ್ರರು ಹಿಮಕರಗಲು ಕಾಯುತ್ತಿದ್ದರಾದರೂ ಈ ಸರ್ತಿ ಇದಕ್ಕೂ ಮುನ್ನ ಗಡಿಯುದ್ದಕ್ಕೂ ವಕ್ಕರಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಕ್ರಮವಾಗಿ ನುಸುಳುವ ಉಗ್ರರ ಹೆಡೆಮುರಿಕಟ್ಟಲು ಪಾಕ್ ಗಡಿಯಲ್ಲಿ ನಿಯೋಜಿತರಾಗಿರುವ ಸೇನೆ ಹಾಗೂ ಅರೆಸೇನಾಪಡೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ.
ಕಾಶ್ಮೀರದಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸುವುದರೊಂದಿಗೆ ಈ ದುಷ್ಕರ್ಮಿಗಳು ಎಲ್ಲೆಲ್ಲ ಸಾಧ್ಯವೋ ಅಲ್ಲೆಲ್ಲ ಚುನಾವಣೆಗೆ ಹಾನಿಯುಂಟುಮಾಡಲೂ ನಿರ್ಧರಿಸಿದ್ದಾರೆ ಎಂದು ಬೇಹುಗಾರಿಕಾ ಮಾಹಿತಿಗಳು ಹೇಳಿವೆ.
ಉಗ್ರರ ನುಸುಳುವಿಕೆಯನ್ನು ತಡೆಯಲು 778 ಕಿಲೋ ಮೀಟರ್ ಗಡಿನಿಯಂತ್ರಣ ರೇಖೆಯಲ್ಲಿ ಸೇನಾಪಡೆಗಳನ್ನು ಮರುನಿಯೋಜಿಸಲಾಗಿದೆ. ರಾಜಸ್ಥಾನ್ ಮತ್ತು ಪಂಜಾಬಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಉನ್ನತ ಮಟ್ಟದ ಕಾವಲಿಗೆ ಗೃಹಸಚಿವ ಪಿ.ಚಿದಂಬರಂ ಆದೇಶ ನೀಡಿದ್ದಾರೆ.
ಪಾಕಿಸ್ತಾನ್ ರೇಂಜರ್ಗಳು ಜಮ್ಮು ಗಡಿಯಾದ್ಯಂತ ಸುಮಾರು ಒಂದು ಸಾವಿರ ಚಿಲ್ಲರೆ ಬಂಕರ್ಗಳನ್ನು ನಿರ್ಮಿಸಿದ್ದು, ಈ ಬಂಕರುಗಳು ಪೂಂಛ್ ಹಾಗೂ ಅಕ್ನೂರ್ ಕೇಂದ್ರಗಳಲ್ಲಿ ಉಗ್ರರಿಗೆ ಭಾರತ ಪ್ರವೇಶಕ್ಕೆ ಸಹಾಯಕವಾಗಲಿದೆ ಎಂದು ಜಮ್ಮು ವಲಯದ ಐಡಿಪಿ ರಾಜೇಂದ್ರ ಅವರು ತಿಳಿಸಿದ್ದಾರೆ. ಪಾಲನ್ವಾಲ, ಪರ್ಗ್ವಾಲ, ಅಬ್ದುಲ್ಲಿಯನ್, ಕನಾಚಕ್ ಮತ್ತು ಸಾಜಿಯನ್ಗಳು ಭಯೋತ್ಪಾದಕರ ಪ್ರವೇಶ ಪ್ರದೇಶಗಳಾಗಿರಬಹುದು ಎಂದು ಅವರು ಹೇಳಿದ್ದಾರೆ.
"ಲಷ್ಕರೆ ಉಗ್ರರು ಕಳೆದ ವರ್ಷ ಕನಾಚಕ್ ಪ್ರದೇಶದಲ್ಲಿ ನುಸುಳಿರುವ ಮಾದರಿಯಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ರಾಷ್ಟ್ರವನ್ನು ಪ್ರವೇಶಿಸಬಹುದು" ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ತಾಲಿಬಾನಿಗಳು ಕಾಶ್ಮೀರಕ್ಕೆ ನುಸುಳಬಹುದು ಎಂಬ ಊಹೆಗಳಿದ್ದರೂ ಇದನ್ನು ಉನ್ನತ ಅಧಿಕಾರಿಗಳು ತಳ್ಳಿಹಾಕಿದ್ದಾರೆ. |