ಸಿಖ್ ಹತ್ಯಾಕಾಂಡ ಪ್ರಕರಣದ ಆರೋಪಿಯಾಗಿದ್ದ ಜಗದೀಶ್ ಟೈಟ್ಲರ್ ಅವರನ್ನು ಚುನಾವಣಾ ಕಣಕ್ಕಿಳಿಸಿರುವ ಕಾಂಗ್ರೆಸ್ ತೀವ್ರ ಒತ್ತಡ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಅಂತಃಸಾಕ್ಷಿಯ ಕರೆಗೆ ಓಗೊಡುವಂತೆ ಟೈಟ್ಲರ್ ಅವರಿಗೆ ಕಾಂಗ್ರೆಸ್ ಹೇಳಿದೆ ಎನ್ನಲಾಗಿದ್ದು, ಪಕ್ಷವು ಅವರನ್ನು ಕೈಬಿಡುವ ಸುಳಿವು ಲಭ್ಯವಾಗಿದೆ.
ಟೈಟ್ಲರ್ ಅವರ ಅಭ್ಯರ್ಥಿತನವನ್ನು ಹಿಂತೆಗೆಯಲು ಕಾಂಗ್ರೆಸ್ ನಿರ್ಧರಿಸಿದ್ದು, ಟೈಟ್ಲರ್ ಅವರು ತಾನು ಸ್ವತಹ ಸ್ಫರ್ಧೆಯಿಂದ ಹಿಂತೆಗೆಯುವುದಾಗಿ ಘೋಷಿಸುವಂತೆ ಸೂಚಿಸಲು ಚಿಂತಿಸಿರುವ ಪಕ್ಷವು ನೈತಿಕ ನಿರ್ಧಾರ ಕೈಗೊಳ್ಳುವಂತೆ ಅವರಿಗೆ ಸೂಚಿಸಿದೆ ಎಂದು ದೃಢಪಡಿಸಲಾಗದ ಮೂಲಗಳು ಹೇಳಿವೆ.
ಗುರುವಾರ ಮುಂಜಾನೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಟೈಟ್ಲರ್ ಅವರು, ನ್ಯಾಯಾಲಯದ ತೀರ್ಪಿಗೆ ಕಾಯದೆ ಅಂತಿಮ ನಿರ್ಧಾರ ಕೈಗೊಳ್ಳಲಾಗದು ಎಂದು ಹೇಳಿದ್ದಾರೆ. ಈ ವಿಷಯ ಕುರಿತು ನ್ಯಾಯಾಲಯ ತೀರ್ಪು ನೀಡಿದ ಬಳಿಕವಷ್ಟೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.
ಟೈಟ್ಲರ್ ಅವರನ್ನು ಕಣಕ್ಕಿಳಿಸಿರುವ ಕ್ರಮವು ಸಿಖ್ ಸಮುದಾಯದಲ್ಲಿ ಆಕ್ರೋಶ ಸೃಷ್ಟಿಸಿದ್ದು, ಕಾಂಗ್ರೆಸ್ ಸಿಖ್ ಮತಗಳನ್ನು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದೆ.
ಜಗದೀಶ್ ಟೈಟ್ಲರ್ ಗುರುವಾರ ಸಾಯಂಕಾಲ ಪತ್ರಿಕಾಗೋಷ್ಠಿ ಕರೆದು ತನ್ನ ನಿಲುವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. |