ಹಿಂದು ಮತ್ತು ಮುಸ್ಲಿಮರ ನಡುವೆ ಮಾತುಕತೆ ಮೂಲಕವೇ ರಾಮಮಂದಿರ ವಿವಾದವನ್ನು ಬಗೆಹರಿಸಬಹುದೇ ವಿನಹ ಕಾನೂನಿನ ಮುಖಾಂತರ ಅಲ್ಲ ಎಂಬುದಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಸಿಂಗ್ ಅವರು 90ರ ದಶಕದ ಅಯೋಧ್ಯಾ ಚಳುವಳಿಯಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು.
ಇತ್ತೀಚೆಗೆ ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರಿರುವ ಸಿಂಗ್ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ನೈತಿಕ ಹೊಣೆಹೊತ್ತಿದ್ದಾರೆ. ಎರಡೂ ಸಮುದಾಯದ ಭಾವನೆಗಳನ್ನು ಪರಿಗಣಿಸದೆ ಹೊಸ ಕಾನೂನನ್ನು ಜಾರಿಗೆ ತಂದರೆ ಅದು ಯಾವುದೇ ಪರಿಣಾಮ ಬೀರದು, ಇದು ಇನ್ನಷ್ಟು ಗಲಭೆಗಳಿಗೆ ಕಾರಣವಾಗಬಹುದು ಹಾಗೂ ರಾಷ್ಟ್ರದಲ್ಲಿ ವಿಭಜಕ ಶಕ್ತಿಗಳನ್ನು ಹೆಚ್ಚಿಸಬಹುದು ಎಂಬುದಾಗಿ ಅವರು ಹೇಳಿದ್ದಾರೆ.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ 77ರ ಹರೆಯದ ಸಿಂಗ್, ರಾಜಕೀಯ ಶಕ್ತಿಗಳಲ್ಲಿನ ಬೃಹತ್ ಮರು ಮೈತ್ರಿಗಳು ಉತ್ತರ ಭಾರತದ ರಾಜಕೀಯ ದೃಶ್ಯವನ್ನೇ ಬದಲಿಸಲಿದೆ ಹಾಗೂ ಬಿಎಸ್ಪಿ ಮತ್ತು ಬಿಜೆಪಿಗಳಿಗೆ ಭಾರೀ ಹಿನ್ನಡೆ ಉಂಟುಮಾಡಲಿದೆ ಎಂದು ಭವಿಷ್ಯ ನುಡಿದರು.
ರಾಮಮಂದಿರವನ್ನು ನಿರ್ಮಿಸುವ ಭರವಸೆ ನೀಡಿರುವ ಬಿಜೆಪಿಗೆ, ಎನ್ಡಿಎ ಮೈತ್ರಿಕೂಟದ ಹೆಚ್ಚಿನ ಪಕ್ಷಗಳು ಇದನ್ನು ವಿರೋಧಿಸುವುದು ತಿಳಿದಿದೆ. ಬಿಜೆಪಿಯು ನಕಲಿ ಪ್ರಣಾಳಿಯನ್ನು ಪ್ರಸ್ತುತ ಪಡಿಸಿದ್ದು, ಅದು ಅಧಿಕಾರಕ್ಕೆ ಬಂದರೆ ಎನ್ಡಿಎ ಕಾರ್ಯಸೂಚಿಗೆ ಅಂಟಿಕೊಳ್ಳಲಿದೆ ಎಂದು ಅವರು ವ್ಯಂಗ್ಯವಾಡಿದರು.
ರಾಮಮಂದಿರ ನಿರ್ಮಾಣ ಸೇರಿದಂತೆ ಬಿಜೆಪಿಯು ಇನ್ನೂ ಭಾವನಾತ್ಮಕ ವಿಚಾರಗಳನ್ನೇ ಎತ್ತುತ್ತಿದೆ. ಆದರೆ, ಕೇಂದ್ರದಲ್ಲಿ ಆರುವರ್ಷಗಳಿಗೂ ಹೆಚ್ಚುಕಾಲ ಆಡಳಿತ ಹೊಂದಿದ್ದ ವೇಳೆ ಪಕ್ಷವು ಏನು ಮಾಡುತ್ತಿತ್ತು ಎಂಬುದಾದಿ ಈ ದೇಶದ ಜನತೆ ಕೇಳುತ್ತಿದ್ದಾರೆ ಎಂದು ಅವರು ನುಡಿದರು. |