ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವ ಕುರಿತ ವಿಚಾರಣೆಯನ್ನು ದೆಹಲಿ ನ್ಯಾಯಾಲಯ ಒಂದು ಗುರುವಾರ ಮುಂದೂಡಿದೆ. ಮುಂದಿನ ವಿಚರಾಣಯನ್ನು ಎಪ್ರಿಲ್ 28 ಮತ್ತು 29ಕ್ಕೆ ಮುಂದೂಡಿದೆ.
1984ರ ನವೆಂಬರ್ 1ರಂದು ನಡೆದ ಗಲಭೆಯ ವೇಳೆಗೆ ತಾನು ಗುರುದ್ವಾರದ ಬಳಿಯಲ್ಲಿ ಇರಲಿಲ್ಲ ಎಂಬುದನ್ನು ಸಾಬೀತು ಪಡಿಸಲು ಟೈಟ್ಲರ್ ಸಲ್ಲಿಸಿದ್ದಾರೆಂದು ಹೇಳಲಾಗಿರುವ ಸಿಡಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಸಿಬಿಐಗೆ ಸೂಚಿಸಿದೆ.
ಪ್ರಕರಣದ ವಿಚಾರಣಾ ಪ್ರಕ್ರಿಯೆ ಆರಂಭಗೊಳ್ಳುತ್ತಿರುವಂತೆ, ಅಡಿಷನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಈ ಪ್ರಕರಣವನ್ನು ವಿಚಾರಿಸುವ ಹಕ್ಕಿಲ್ಲ, ವಿಶೇಷ ನ್ಯಾಯಾಲಯಕ್ಕೆ ಮಾತ್ರ ಈ ಹಕ್ಕಿದೆ ಎಂದು ಸಿಬಿಐ ವಕೀಲರು ವಾದಿಸಿದರು.
ಆದರೆ, ಸಿಖ್ ನರಮೇಧ ಬಲಿಪಶುಗಳ ವಕೀಲರು ಸಿಬಿಐ ನಿಲುವನ್ನು ಬಲವಾಗಿ ವಿರೋಧಿಸಿದ್ದು, ಇದೇ ನ್ಯಾಯಾಲಯವು ಡಿಸೆಂಬರ್ 2007ರಲ್ಲಿ ಪ್ರಕರಣವನ್ನು ವಿಚಾರಿಸುವಂತೆ ಸಿಬಿಐಗೆ ಆದೇಶ ನೀಡಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಟೈಟ್ಲರ್ ವಿಚಾರಣೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಅಪಾರ ಸಂಖ್ಯೆಯ ಸಿಖ್ ಸಮುದಾಯದ ಮಂದಿ ಜಮಾಯಿಸಿದ್ದರು. ಇವರು ಟೈಟ್ಲರ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. |