ಸಿಖ್ ಸಮುದಾಯದ ತೀವ್ರ ವಿರೋಧ ಹಾಗೂ ಪಕ್ಷದೊಳಗಿನ ಒತ್ತಡದಿಂದಾಗಿ ಕೊನೆಗೂ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರು ಈಶಾನ್ಯ ದೆಹಲಿ ಕ್ಷೇತ್ರದ ತನ್ನ ಅಭ್ಯರ್ಥಿತನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷವು ಇಚ್ಚಿಸಿದಲ್ಲಿ ತಾನು ಸ್ಥಾನ ತ್ಯಜಿಸುವುದಾಗಿ ತಿಳಿಸಿದರು. ಅಲ್ಲದೆ, ನಿರ್ಧಾರ ಕೈಗೊಳ್ಳುವುದು ಪಕ್ಷಾಧ್ಯಕ್ಷೆಗೆ ಬಿಟ್ಟ ವಿಚಾರ ಎಂದು ನುಡಿದರು.
ಚುನಾವಣೆಯಲ್ಲಿ ಸ್ಫರ್ಧಿಸಬೇಕು ಎಂದು ನನಗನ್ನಿಸುತ್ತಿಲ್ಲ. ನಾನು ಅಭ್ಯರ್ಥಿತನದಿಂದ ಹಿಂತೆಗೆದುಕೊಳ್ಳುವುದರಿಂದ ಸಹಾಯವಾಗುತ್ತದೆ ಎಂದಾದರೆ ತಾನು ಅದಕ್ಕೆ ಸಿದ್ಧ ಎಂದು ಅವರು ನುಡಿದರು.
ಚುನಾವಣೆಗಳಲ್ಲಿ ನಾನು ಸ್ಫರ್ಧಿಸಕೂಡದು ಎಂಬುದಾಗಿ ಒತ್ತಾಯಿಸಲು ಪಕ್ಷದ ಯಾರೂ ತನ್ನನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ ಟೈಟ್ಲರ್ ಪತ್ರಿಕಾಗೋಷ್ಠಿಯ ಬಳಿಕ ತಾನು ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗುವುದಾಗಿ ತಿಳಿಸಿದರು.
1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕ್ಲೀನ್ ಚಿಟ್ ನೀಡಿರುವ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಗುರುವಾರ ಮುಂದೂಡಿದೆ.
ನಾನು ತಪ್ಪು ಮಾಡಿಲ್ಲ: ಸಿಖ್ ನರಮೇಧಕ್ಕೂ ನನಗೂ ಸಂಬಂಧವಿಲ್ಲ ಎಂದು ಪುನರುಚ್ಚರಿಸಿದ ಅವರು ನನ್ನ ವಿರುದ್ಧ ಯಾವುದೇ ಅಫಿದಾವಿತ್ ಹಾಕಲಾಗಿಲ್ಲ. ಆಡ್ವಾಣಿ ಅವರು ಗೃಹಸಚಿವರಾಗಿರುವಾಗಲೇ ಸಿಬಿಐ ತನ್ನ ವಿರುದ್ಧ ಕ್ಲೀನ್ ಚಿಟ್ ನೀಡಿದೆ ಎಂಬುದಾಗಿ ಟೈಟ್ಲರ್ ನುಡಿದರು. ಅಲ್ಲದೆ ಈ ವಿಚಾರವಾಗಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಸಾಕಷ್ಟು ಹಾನಿಯುಂಟುಮಾಡಲಾಗಿದೆ ಎಂದು ಅವರು ನುಡಿದರು. |