ಸಿಖ್ ಸಮುದಾಯಕ್ಕೆ ಅನ್ಯಾಯವಾಗಿದೆ, ಆ ಸಂದರ್ಭದಲ್ಲಿ ಏನು ನಡೆಯಿತೋ ಅದಕ್ಕಾಗಿ ನಾನು ಸಾವಿರ ಸಲ ಕ್ಷಮೆ ಯಾಚಿಸಲಿದ್ದೇನೆ ಎಂದು ಸಿಖ್ ವಿರೋಧಿ ಗಲಭೆ ವಿವಾದದ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಜಗದೀಶ್ ಟೈಟ್ಲರ್ ವಿಷಾದ ವ್ಯಕ್ತಪಡಿಸಿದ್ದಾರೆ.
"ಅದು ನಮ್ಮ ಆಡಳಿತಾವಧಿಯಲ್ಲಿ ನಡೆದ ಘಟನೆಯಾದ ಕಾರಣ ನಾನು ಕ್ಷಮೆಯಾಚಿಸಲಿದ್ದೇನೆ. ಇಡೀ ಸಿಖ್ ಸಮುದಾಯಕ್ಕೆ ಆದ ಅನ್ಯಾಯಕ್ಕಾಗಿ ನಾನು ಸಾವಿರ ಸಾವಿರ ಸಲ ಕ್ಷಮೆಯಾಚಿಸಲಿದ್ದೇನೆ. ನಡೆದಿರುವುದು ನಾಚಿಕೆಗೇಡು ಎಂದು ನಾನು ಹೇಳಲಿದ್ದೇನೆ" ಎಂದು 1984ರ ಸಿಖ್ ಗಲಭೆಯ ಬಗ್ಗೆ ಮಾತನಾಡುತ್ತಾ ಟೈಟ್ಲರ್ ತಿಳಿಸಿದ್ದಾರೆ.
ಆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕಾಗಿದ್ದ ಆಡಳಿತ ಮತ್ತು ರಾಜ್ಯಪಾಲರು ಕಾರ್ಯಪ್ರವೃತ್ತರಾಗಲಿಲ್ಲ ಎಂಬುದನ್ನು ನಾನು ಹೇಳಲು ಇಚ್ಛಿಸುತ್ತೇನೆ ಎಂದೂ ಟೈಟ್ಲರ್ ಆರೋಪಿಸಿದ್ದಾರೆ.
1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆಯಲ್ಲಿ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ ಪಾಲ್ಗೊಂಡಿದ್ದಾರೆ ಎಂಬ ಆರೋಪಗಳನ್ನು ಇತ್ತೀಚೆಗೆ ಸಿಬಿಐ ನ್ಯಾಯಾಲಯ ಮುಕ್ತಗೊಳಿಸಿತ್ತು. ಇದರಿಂದ ರೊಚ್ಚಿಗೆದ್ದಿದ್ದ ಸಿಖ್ಖರು ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಜರ್ನೈಲ್ ಸಿಂಗ್ ಎಂಬ ಪತ್ರಕರ್ತ ಗೃಹ ಸಚಿವ ಪಿ. ಚಿದಂಬರಮ್ ಮೇಲೆ ಶೂ ಎಸೆದು ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದ.
ಒಟ್ಟಾರೆ ವಿವಾದಗಳಿಂದ ಬೇಸತ್ತ ಕಾಂಗ್ರೆಸ್ ಇವರಿಬ್ಬರಿಗೂ ಟಿಕೆಟ್ ನೀಡುವುದಿಲ್ಲ ಎಂದು ಘೋಷಿಸಿದೆ. ಇದರಿಂದ ಸಂತಸಗೊಂಡಿರುವ ಬೂಟು ಪ್ರಕರಣದ ರೂವಾರಿ ಜರ್ನೈಲ್ ಸಿಂಗ್, ಟೈಟ್ಲರ್ಗೆ ಟಿಕೆಟ್ ನೀಡದಿರುವುದು ನಮ್ಮ ಹೋರಾಟಕ್ಕೆ ಸಂದ ಜಯ- ಆದರೆ ಇಷ್ಟಕ್ಕೇ ಮುಗಿದಿಲ್ಲ. ನಮಗಿನ್ನೂ ನ್ಯಾಯ ಸಿಗಬೇಕಾಗಿದೆ ಎಂದಿದ್ದಾನೆ.
|