ತನ್ನನ್ನು ಚುನಾವಣಾ ಕಣದಿಂದ ದೂರ ಇರಿಸುವ ಸಲುವಾಗಿ ಕಾಂಗ್ರೆಸ್ ಪಕ್ಷದಲ್ಲಿನ ದೆಹಲಿ ವಿಭಾಗದ ಕೆಲವು ನಾಯಕರು 'ಬೂಟೆಸೆತ ಪ್ರಕರಣ'ವನ್ನು ಬಳಸಿಕೊಂಡಿದ್ದಾರೆ ಎಂದು ಲೋಕಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವ ಜಗದೀಶ್ ಟೈಟ್ಲರ್ ಆರೋಪಿಸಿದ್ದಾರೆ.
ಇದೀಗ ನಡೆದಿರುವ ವಿವಾದಗಳಿಂದ ನಾನು ವಿಚಲಿತನಾಗಿಲ್ಲ. ನಾನು ಪೂರ್ಣ ಪ್ರಮಾಣದ ದೃಢತೆಯಿಂದಿದ್ದೇನೆ. ಇದು ಕೇವಲ ಅಕಾಲಿ ದಳದ ಕೃತ್ಯವಲ್ಲ. ನನ್ನನ್ನು ಕಂಡರಾಗದ ಕೆಲವು ನನ್ನದೇ ಪಕ್ಷದವರು ಅಕಾಲಿ ದಳಕ್ಕೆ ಸಹಾಯ ಮಾಡಿದ್ದಾರೆ. ಇದು ನನಗೆ ತಿಳಿದಿದೆ ಎಂದು ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಾ ಟೈಟ್ಲರ್ ತಿಳಿಸಿದರು.
ನೀವು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ರತ್ತ ಬೊಟ್ಟು ಮಾಡುತ್ತಿದ್ದೀರಾ ಎಂದು ವರದಿಗಾರರು ಪ್ರಶ್ನಿಸಿದ್ದಕ್ಕೆ, ನಾನು ಯಾರನ್ನೂ ಹೆಸರಿಸಲು ಬಯಸುವುದಿಲ್ಲ ಎಂದಷ್ಟೇ ಹೇಳಿದರು.
1984ರ ಸಿಖ್ ವಿರೋಧಿ ಗಲಭೆಯ ಆರೋಪಿ ಜಗದೀಶ್ ಟೈಟ್ಲರ್ ದೋಷಮುಕ್ತರಾದ ಬಗ್ಗೆ ಪತ್ರಿಕಾಗೋಷ್ಠಿಯೊಂದರಲ್ಲಿ ದೈನಿಕ್ ಜಾಗರಣ್ ಪತ್ರಿಕೆಯ ವರದಿಗಾರ ಜರ್ನೈಲ್ ಸಿಂಗ್ ಗೃಹ ಸಚಿವ ಪಿ. ಚಿದಂಬರಂರಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದ. ಸಮರ್ಪಕ ಉತ್ತರ ದೊರೆಯದ ಹಿನ್ನಲೆಯಲ್ಲಿ ತನ್ನ ಬೂಟು ಬಿಚ್ಚಿ ಸಚಿವರತ್ತ ಎಸೆದಿದ್ದ. ಈ ಪ್ರಕರಣ ರಾಷ್ಟ್ರದಾದ್ಯಂತ ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಬಿರುಗಾಳಿಯನ್ನೆಬ್ಬಿಸಿತ್ತು. ಈ ಹಿನ್ನಲೆಯಲ್ಲಿ ಟೈಟ್ಲರ್ರನ್ನು ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದಕ್ಕೆ ಪಡೆದುಕೊಂಡಿತ್ತು.
ಕಾಂಗ್ರೆಸ್ ಪಕ್ಷದವರೇ ಅಕಾಲಿ ದಳದವರೊಂದಿಗೆ ಸೇರಿಕೊಂಡು ನನ್ನನ್ನು ಮುಗಿಸಿದ್ದಾರೆ ಎಂದು ಆರೋಪಿಸಿರುವ ಟೈಟ್ಲರ್ ಯಾರನ್ನೂ ಹೆಸರಿಸದಿದ್ದರೂ ಅವರು ದೆಹಲಿಯ ರಾಜ್ಯ ರಾಜ್ಯಕಾರಣದತ್ತ ಬೊಟ್ಟು ಮಾಡುತ್ತಿದ್ದುದು ಎದ್ದು ಕಾಣುತ್ತಿತ್ತು. ಮತ್ತೆ ಮಾತು ಮುಂದುವರಿಸುತ್ತಾ ಅವರು, ನನ್ನ ಬೂಟುಗಳಿಗೆ ನನ್ನದೇ ಸ್ವಂತಃ ಪಕ್ಷದಿಂದ ದೊಡ್ಡ ಹೊಡೆತಗಳು ಬಿದ್ದಿವೆ ಎಂಬರ್ಥದಲ್ಲಿ ದೆಹಲಿ ಕಾಂಗ್ರೆಸನ್ನು ಉಲ್ಲೇಖಿಸುತ್ತಾ ತಿಳಿಸಿದರು. ಆದರೆ ಅವರ ಮಾತುಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಬಗ್ಗೆ ಯಾವುದೇ ಆರೋಪಗಳಿದ್ದಂತೆ ಕಂಡು ಬರಲಿಲ್ಲ.
ದೀಕ್ಷಿತ್ ಅಥವಾ ಅವರ ಮಗ ಸಂದೀಪ್ ದೀಕ್ಷಿತ್ ಜತೆ ಚುನಾವಣೆ ವಿಚಾರದಲ್ಲಿ ಕಚ್ಚಾಡಲು ನಾನು ಬಯಸುವುದಿಲ್ಲ ಎಂದೂ ಇದೇ ಸಂದರ್ಭದಲ್ಲಿ ಟೈಟ್ಲರ್ ತಿಳಿಸಿದ್ದಾರೆ.
ಇತ್ತ ಮತ್ತೊಂದು ಬೆಳವಣಿಗೆಯಲ್ಲಿ ಟೈಟ್ಲರ್ ಮತ್ತು ಸಜ್ಜನ್ ಕುಮಾರ್ರವರಿಗೆ ಕಾಂಗ್ರೆಸ್ ಲೋಕಸಭಾ ಚುನಾವಣಾ ಟಿಕೆಟ್ ನಿರಾಕರಿಸಿರುವುದನ್ನು ಶೀಲಾ ದೀಕ್ಷಿತ್ ಸ್ವಾಗತಿಸಿದ್ದಾರೆ. ಇದರಿಂದಾಗಿ ಪಕ್ಷಕ್ಕೆ ಲಾಭವಾಗಲಿದೆ, ಕಳಂಕ ತಪ್ಪಿದಂತಾಗಿದೆ ಎಂದು ದೀಕ್ಷಿತ್ ಹೇಳಿಕೊಂಡಿದ್ದಾರೆ.
|