ಕಾಂಗ್ರೆಸ್ ನಿಲುವುಗಳನ್ನು ವಿರೋಧಿಸಿ ನಿವೃತ್ತ ಶಾಲಾ ಉಪಾಧ್ಯಾಯರೊಬ್ಬರು ಕುರುಕ್ಷೇತ್ರ ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ರತ್ತ ಶೂಗಳನ್ನು ಎಸೆದ ಘಟನೆ ವರದಿಯಾಗಿದ್ದು, ಒಂದೇ ವಾರದಲ್ಲಿ ಎರಡು 'ಬೂಟು' ಪ್ರಕರಣಗಳು ನಡೆದಂತಾಗಿದೆ. ಅವೆರಡೂ ಕೂಡ ಕಾಂಗ್ರೆಸ್ ಪಕ್ಷದ ವಿರುದ್ಧವೇ ಆಗಿರುವುದು ಕಾಕತಾಳೀಯ. ಎರಡು ದಿನಗಳ ಹಿಂದೆ ಗೃಹ ಸಚಿವ ಪಿ. ಚಿದಂಬರಮ್ ಮೇಲೆ ಪತ್ರಕರ್ತನೊಬ್ಬ ಶೂ ಎಸೆದಿದ್ದ.
ಹರ್ಯಾಣದ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನವೀನ್ ಜಿಂದಾಲ್ ಚುನಾವಣಾ ಪ್ರಚಾರದಲ್ಲಿದ್ದಾಗ ರಾಮ್ ಕುಮಾರ್ ಎಂಬ ನಿವೃತ್ತ ಶಾಲಾ ಶಿಕ್ಷಕರು ಈ ಬಾರಿ ಬೂಟನ್ನೆಸೆದವರು. ಆದರೆ ಬೂಟು ಸಂಸದರ ಮೇಲೆ ಬಿದ್ದಿಲ್ಲ ಎನ್ನಲಾಗಿದೆ.
ತಾನು ಕಾಂಗ್ರೆಸ್ನ ನಿಲುವುಗಳನ್ನು ವಿರೋಧಿಸಿ ಬೂಟನ್ನು ಎಸೆದಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣವೇ ಅವರನ್ನು ಸುತ್ತಲಿದ್ದ ಕಾರ್ಯಕರ್ತರು ಹಿಡಿದಿಟ್ಟಿದ್ದರು. ನಂತರ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರ್ಯಾಲಿ ನಡೆಯುತ್ತಿರುವ ಸ್ಥಳದಿಂದ ಅವರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಂದಾಲ್, ಬೂಟೆಸೆದ ಕುಮಾರ್ ಪಾನಮತ್ತರಾಗಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೇ ವೈಯಕ್ತಿಕವಾಗಿ ನಾನು ಅವರನ್ನು ಕ್ಷಮಿಸಿದ್ದೇನೆ. ನನಗೆ ಅವರ ಮೇಲೆ ಯಾವುದೇ ದ್ವೇಷವಿಲ್ಲ. ಆದರೂ ಘಟನೆಯಿಂದ ಆಶ್ಚರ್ಯವಾಗಿದೆ ಎಂದಿದ್ದಾರೆ.
ಒಂದೇ ವಾರದ ಅವಧಿಯಲ್ಲಿ ಕಾಂಗ್ರೆಸ್ ಮುಖಂಡರಿಗೆ ಇದು ಎರಡನೇ ಬೂಟಿನನುಭವ. ಕಳೆದೆರಡು ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂರತ್ತ ದೈನಿಕ್ ಜಾಗರಣ್ ಪತ್ರಿಕೆಯ ವರದಿಗಾರ ಜರ್ನೈಲ್ ಸಿಂಗ್ ಶೂ ಎಸೆದಿದ್ದ. ಸಿಖ್ ವಿರೋಧಿ ಗಲಭೆಯಿಂದ ಆರೋಪ ಮುಕ್ತರಾಗಿದ್ದ ಹಿನ್ನಲೆಯನ್ನು ಪತ್ರಕರ್ತ ಪ್ರಶ್ನಿಸಿದಾಗ ಸಚಿವರಿಂದ ಸಮರ್ಪಕ ಉತ್ತರ ಬಾರದ ಹಿನ್ನಲೆಯಲ್ಲಿ ಸಿಂಗ್ ಬೂಟೆಸೆದಿದ್ದ. ನಂತರದ ಬೆಳವಣಿಗೆಯಲ್ಲಿ ಟೈಟ್ಲರ್ರನ್ನು ಕಾಂಗ್ರೆಸ್ ಚುನಾವಣಾ ಕಣದಿಂದ ಹಿಂದಕ್ಕೆ ಪಡೆದುಕೊಂಡಿತ್ತು. ಇದೀಗ ಮತ್ತೊಂದು ಶೂ ಪ್ರಕರಣ ಹರ್ಯಾಣದಲ್ಲಿ ನಡೆದಿದೆ.
|