ಭಯೋತ್ಪಾದನೆ ತಡೆಗಟ್ಟುವಲ್ಲಿ ನಮ್ಮ ಸರ್ಕಾರ ವಿಫಲವಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಸ್ವತಃ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ. ಭಯೋತ್ಪಾದನೆ ತಡೆಗೆ ಸಕಲ ಸಿದ್ಧತೆ ನಡೆಸಿದ್ದರೂ, ಇನ್ನೂ ಭದ್ರತಾ ವ್ಯವಸ್ಥೆ, ಪೊಲೀಸ್ ವ್ಯವಸ್ಥೆ, ಅಲ್ಲದೆ, ದಾಳಿ ನಡೆದರೆ ಅದನ್ನು ಎದುರಿಸಲು ಮತ್ತಷ್ಟು ಸಾಮರ್ಥ್ಯ ಬೆಳೆಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
"ರಾಷ್ಟ್ರವು ಗಂಭೀರವಾದ ಬೆದರಿಕೆ ಎದುರಿಸುತ್ತಿದೆ. ಚುನಾವಣಾ ಪ್ರಕ್ರಿಯೆಯನ್ನು ಅಸ್ಥಿರಗೊಳಿಸುವ ತಮ್ಮ ಪ್ರಯತ್ನವನ್ನು ಉಗ್ರರು ಬಿಟ್ಟಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿಯುತ ಹಾಗೂ ಯಶಸ್ವೀ ಮತದಾನ ನಡೆಯುವುದು ವಿದೇಶದಲ್ಲಿನ ಕೆಲವು ಶಕ್ತಿಗಳಿಗೆ ಬೇಕಾಗಿಲ್ಲ" ಎಂದು ನುಡಿದರು. ಅವರು ಮಹಿಳಾ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
"ಅಕ್ರಮ ನುಸುಳುವಿಕೆಯ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಅಸ್ಥಿರಗೊಳಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನಾವು ಕಟ್ಟೆಚ್ಚರ ವಹಿಸಿದ್ದೇವೆ ಮತ್ತು ಈ ವಿಪತ್ತನ್ನು ತಡೆಯಲು ನಾವು ಕಟ್ಟೆಚ್ಚರ ವಹಿಸಬೇಕಿದೆ" ಎಂದು ಅವರು ನುಡಿದರು.
ಕಳೆದ ಕೆಲವು ವರ್ಷಗಳಿಂದ ರಾಷ್ಟ್ರದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ಪ್ರತಿಕ್ರಿಯಿಸಿದ ಅವರು, "ಮುಚ್ಚುಮರೆಯಿಲ್ಲದೆ ಹೇಳುವುದಾದರೆ, ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸುವುದರಲ್ಲಿ ನಾವು ಯಶಸ್ವಿಯಾಗಿಲ್ಲ. ಇನ್ನಷ್ಟು ಗಮನಹರಿಸಬೇಕಾದ ಅವಶ್ಯಕತೆ ಇದೆ" ಎಂದು ಅವರು ನುಡಿದರು. |