ಸಿಖ್ ಸಮುದಾಯದ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಅವರ ಟಿಕೇಟ್ಗಳನ್ನು ರದ್ದು ಪಡಿಸಲಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಟಿಕೆಟ್ ರದ್ದತಿಯು ಸಿಖ್ ಸಮುದಾಯದೆಡೆಗೆ ಕಾಂಗ್ರೆಸ್ ಪಕ್ಷದ ಸೂಕ್ಷ್ಮತೆಯನ್ನು ತೋರುತ್ತದೆ ಎಂದು ನುಡಿದರು.
'ವಿಳಂಬವಾಗಿಯೂದರೂ ನಿರ್ಧಾರಕೈಗೊಂಡಿರುವುದು, ನಿರ್ಧಾರ ಕೈಗೊಳ್ಳದೇ ಇರುವುದಕ್ಕಿಂತ ಉತ್ತಮ' ಎಂದು ಅವರು ನುಡಿದರು. ಸಿಬಿಐ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದಕ್ಕೂ ಕಾಂಗ್ರೆಸ್ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, "ಈ ಕುರಿತು ನನ್ನ ಸಲಹೆ ಕೇಳಿಲ್ಲ ಅಥವಾ ನನಗೆ ಮಾಹಿತಿ ನೀಡಿಲ್ಲ. ಈ ಕುರಿತು ನನಗೆ ತಿಳಿದು ಬಂದಾಗ ಸಿಬಿಐ ನಿರ್ದೇಶಕರೊಂದಿಗೆ ನಾನು ಚರ್ಚಿಸಿದ್ದೇನೆ. ವಾಡಿಕೆಯ ಕ್ರಮದಂತೆ ತಾವು ನ್ಯಾಯಾಲಯಕ್ಕೆ ವರದಿ ಒಪ್ಪಿಸಿದ್ದೇವೆ ಎಂದು ತಿಳಿಸಿದ್ದಾರೆ. ಸಿಬಿಐ ವರದಿಯಲ್ಲಿ ಪಕ್ಷದ ಕೈವಾಡ ಇದೆ ಎಂಬುದು ಶುದ್ಧ ತಪ್ಪು" ಎಂದು ಪ್ರಧಾನಿ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿಯ ವಿರುದ್ಧ ಹರಿಹಾಯ್ದ ಅವರು, ಉಗ್ರರ ದಾಳಿ ನಡೆದಾಗ ಯುಪಿಎ ಸರ್ಕಾರ ಸಚಿವರನ್ನು ಕಳುಹಿಸಿಲ್ಲ ಬದಲಿಗೆ, ಕಮಾಂಡೋಗಳನ್ನು ಕಳುಹಿಸಿದೆ ಎನ್ನುತ್ತಾ ಬಿಜೆಪಿಯು ಕಂಧಹಾರ್ ವಿಮಾನ ಅಪಹರಣ ಪ್ರಕರಣವನ್ನು ಬಿಜೆಪಿ ನಿಭಾಯಿಸಿದ ರೀತಿಯನ್ನು ಟೀಕಿಸಿದರು.
ಆಡ್ವಾಣಿ ಅವರನ್ನು ತಾನು ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಪರಿಗಣಿಸುವುದಿಲ್ಲ ಎಂದು ನುಡಿದ ಅವರು, ಈ ಕಾರಣದಿಂದಾಗಿ ಆಡ್ವಾಣಿಯವರ ಬಹಿರಂಗ ಚರ್ಚೆಯ ಆಹ್ವಾನವನ್ನು ತಾನು ತಿರಸ್ಕರಿಸುವುದಾಗಿ ನುಡಿದರು.
"ಬಿಜೆಪಿಯು ಸಂಸತ್ತಿನ ಕಲಾಪಗಳು ನಡೆಯಲು ಬಿಡಲಿಲ್ಲ. ಈ ಎಲ್ಲ ಚರ್ಚೆಗಳು ಸಂಸತ್ತಿನಲ್ಲಿ ನಡೆಯದಂತೆ ಬಿಜೆಪಿ ಮಾಡಿತ್ತು. ಇದೀಗ ಆಡ್ವಾಣಿ ತನ್ನೊಂದಿಗೆ ಚರ್ಚೆ ಬಯಸುತ್ತಿದ್ದಾರೆ. ಆಡ್ವಾಣಿ ಒಬ್ಬರು ಪರ್ಯಾಯ ಪ್ರಧಾನಿ ಎಂಬುದಾಗಿ ತಾನು ಪರಿಗಣಿಸುವುದಿಲ್ಲ" ಎಂದು ಅವರು ನುಡಿದರು. |